ಬೆಳಗಾವಿ: ಬೆಂಗಳೂರು ಕಾರಾಗೃಹ ಮತ್ತು ಹಿಂಡಲಗಾ ಕೇಂದ್ರ ಕಾರಾಗೃಹವನ್ನು ಸ್ಪೋಟಿಸುವ ಬೆದರಿಕೆ ಹಾಕಲಾಗಿದ್ದು, ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷ ಅವರಿಗೆ ಬೆದರಿಕೆ ಕರೆ ಬಂದಿದೆ.
ತಾವು ವಾಸಿಸುವ ವಸತಿ ಗೃಹದ ಮೇಲೆ ಬಾಂಬ್ ಸ್ಪೋಟಿಸುವುದಾಗಿ ಅನಾಮಧೇಯ ವ್ಯಕ್ತಿ ಕರೆ ಮಾಡಿ ಬೆದರಿಕೆ ಹಾಕಿದ್ದು, ಹಿಂಡಲಗಾ ಜೈಲಿನಲ್ಲಿ ಗಲಭೆ ಸೃಷ್ಟಿಸಿ ಡಿಐಜಿಪಿ ಮೇಲೂ ಹಲ್ಲೆ ಮಾಡಿಸುವುದಾಗಿ ಹೇಳಿದ್ದಾನೆ.
ಅಲ್ಲದೇ ಹಿಂಡಲಗಾ ಜೈಲಿನ ಸಿಬ್ಬಂದಿ ತನಗೆ ಪರಿಚಯಸ್ಥ. ತಾನು ಹಿಂಡಲಗಾ ಜೈಲಿನ ಹೆಡ್ ವಾರ್ಡ್ಗಳಾದ ಜಗದೀಶ್ ಗಸ್ತಿ, ಎಸ್.ಎಂ ಗೋಟೆ ಪರಿಚಯಸ್ಥನೆಂದು ಹೇಳಿದ್ದಾನೆ.
ಟಿ.ಪಿ ಶೇಷ ಅವರ ಸರ್ಕಾರಿ ನಂಬರ್ಗೆ ಫೋನ್ ಕರೆ ಮಾಡಿ ಈ ಬೆದರಿಕೆ ಹಾಕಿದ್ದು, ಭೂಗತ ಪಾತಕಿ ಬನ್ನಂಜೆ ರಾಜಾ ಹೆಸರೂ ಉಲ್ಲೇಖಿಸಿದ್ದಾನೆ. ಅಲ್ಲದೇ ಬನ್ನಂಜೆ ರಾಜಾ ತಾನು ಜೈಲಿನಲ್ಲಿದ್ದಾಗ, ತನಗೆ ಸಹಾಯ ಮಾಡಿದ್ದಾನೆಂದು ಹೇಳಿದ್ದಾನೆ. ಸದ್ಯ ಅನಾಮಧೇಯನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಈತ ಬೆಂಗಳೂರು ಮೂಲದವನು ಎಂದು ತಿಳಿದು ಬಂದಿದೆ.