ಬೆಳಗಾವಿ

ಪತ್ನಿ ಮುಂದೆ ನಡೆಯಿತು ಪತಿಯ ಭೀಕರ ಕೊಲೆ

ಮೂಡಲಗಿ: ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿಅಮಾವಾಸ್ಯೆ ದಿನವಾದ ಇಂದು ಮುಂಜಾನೆ ಹೆಂಡತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದ ಯುವಕನನ್ನು ಪತ್ನಿಯ ಮುಂದೆಯೇ ಬರ್ಬರವಾಗಿ ಕೊಚ್ಚಿ ಕೊಲೆ  ಮಾಡಲಾಗಿದೆ.
ಕೊಲೆಯಾದ ಶಂಕರ್‌ ಸಿದ್ದಪ್ಪ ಜಗಮುತ್ತಿ (25) ಇದೇ ಊರಿನ ನಿವಾಸಿಯಾಗಿದ್ದು, ಬೆಳಗ್ಗೆ ಅಮಾವಾಸ್ಯೆ  ದಿನದ ಪೂಜೆ ಮಾಡಿಸಲೆಂದು ಊರಿನ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಸೋಮವಾರ ಭೀಮನ ಅಮಾವಾಸ್ಯೆಯಾಗಿದ್ದು, ಪತ್ನಿ ಗಂಡನ ಪೂಜೆ ಮಾಡುವ ಕ್ರಮ ಕೆಲವು ಕಡೆ ಇದೆ. ಗಂಡ ಹೆಂಡಿರು ಜತೆಯಾಗಿ ದೇವಸ್ಥಾನಕ್ಕೆ ಹೋದರೂ ಫಲವಿದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಶಂಕರ್‌ ಸಿದ್ದಪ್ಪ ತನ್ನ ಪತ್ನಿ ಪ್ರಿಯಾಂಕಾ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ದೇವಸ್ಥಾನಕ್ಕೆ ಬಂದಿದ್ದರು.
ಈ ರೀತಿ ಹೆಂಡತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದು ಬೈಕ್‌ ನಿಲ್ಲಿಸಲೆಂದು ಹೋದಾಗ ದುಷ್ಕರ್ಮಿ ಆತನ ಮೇಲೆ ಭಯಾನಕವಾಗಿ ಹಲ್ಲೆ ಮಾಡಿದ್ದಾನೆ. ಇದೆಲ್ಲವೂ ಆಕೆಯ ಕಣ್ಣ ಮುಂದೆಯೇ ನಡೆದಿದೆ.
ಮದುವೆಯಾಗಿ ನಾಲ್ಕು ತಿಂಗಳು ಕಳೆದ್ದಿದ್ದವು , ನಿನ್ನೆಯಷ್ಟೇ ಪತ್ನಿ ಪ್ರಿಯಾಂಕಾ ಹುಟ್ಟು ಹಬ್ಬವನ್ನುಕುಟುಂಬಸ್ಥರು ಆಚರಿಸಿದ್ದರು.  
ಘಟನೆ ವಿವರ ನೀಡಿದ ಪತ್ನಿ ಪ್ರಿಯಾಂಕಾ :  ಇವತ್ತು ಬೆಳಗ್ಗೆ ಏಳು ಗಂಟೆಯ ಹೊತ್ತಿಗೆ ಎದ್ದು ನಾನು ಮತ್ತು ಗಂಡ ಬೈಕ್‌ನಲ್ಲಿ ದೇವಸ್ಥಾನಕ್ಕೆ ಬಂದಿದ್ದೆವು. ಅವರು ನನ್ನನ್ನು ದೇವಸ್ಥಾನದ ಮುಂದೆ ಇಳಿಸಿದರು. ನಂತರ ಬೈಕ್‌ ಇಡಲೆಂದು ಪಕ್ಕಕ್ಕೆ ಹೋದರು. ಅವರು ಬೈಕ್‌ ಇಟ್ಟು ಬರುತ್ತಾರೆ ಎಂದು ನೋಡುತ್ತಿದ್ದೆ. ಆದರೆ, ಅಷ್ಟು ಹೊತ್ತಿಗೆ ಯಾರೋ ಒಬ್ಬ ಅವರ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆ ಮಾಡುತ್ತಿರುವುದನ್ನು ನೋಡಿದ ಕೂಡಲೇ ನಾನು ಓಡಿ ಹೋಗಿ ಅವರನ್ನು ಹಿಡಿದುಕೊಳ್ಳುವಷ್ಟರಲ್ಲಿ ಅವರು ಕೆಳಗೆ ಉರುಳಿಬಿದ್ದಿದ್ದರು ಎಂದು ಪತ್ನಿ ಪ್ರಿಯಾಂಕಾ ಘಟನೆಯನ್ನು ವಿವರಿಸಿದ್ದರು.
 
ಕೊಲೆಯಾದ ಶಂಕರನ ಪತ್ನಿ ಪ್ರಿಯಾಂಕಾ ಒಬ್ಬನೇ ವ್ಯಕ್ತಿ ಲಾಂಗ್‌ನಿಂದ ಹಲ್ಲೆ ಮಾಡಿ ಓಡಿ ಹೋಗಿದ್ದಾನೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಪೊಲೀಸರು ತಿಳಿಸಿದ್ದಾರೆ.
 
TV24 News Desk
the authorTV24 News Desk

Leave a Reply