ಬೆಳಗಾವಿ

ಲಂಚ: ಸಿಡಿ‍ಪಿಒ ಲೋಕಾಯುಕ್ತ ಬಲೆಗೆ

ಬೆಳಗಾವಿ: ಆನ್‌ಲೈನ್‌ ಸೆಂಟರ್‌ನ ಸೀಲ್‌ ತೆರವು ಮಾಡಲು ಲಂಚವಾಗಿ ಪಡೆದ ಹಣವನ್ನು ಮರಳಿ ಕೊಡುವಾಗ, ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಅವರ ಕಾರು ಚಾಲಕ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಣ ಪರಸಪ್ಪ ಭಜಂತ್ರಿ ಹಾಗೂ ಕಾರು ಚಾಲಕ ಮಹಾಂತೇಶ ಯಲ್ಲವ್ವ ಮಾದರ ಬಂಧಿತರು.

ಬೆಳಗಾವಿ ನಗರದ ನಿವಾಸಿ ಅದೃಶ್ಯ ಆರ್‌. ತಡಸಲೂರು ಅವರು ಈ ಸಂಬಂಧ ಅ.5ರಂದು ಲೋಕಾಯುಕ್ತರಿಗೆ ದೂರು ನೀಡಿದ್ದರು.

ಅದೃಶ್ಯ ಅವರು ನಡೆಸುತ್ತಿದ್ದ ಜನತಾ ಆನ್‌ಲೈನ್‌ ಸೆಂಟರನ್ನು ಸಿಡಿಪಿಒ ಲಕ್ಷ್ಮಣ ಭಜಂತ್ರಿ ಸೀಲ್‌ ಮಾಡಿದ್ದರು. ಅದನ್ನು ತೆರವು ಮಾಡಲು ₹50 ಸಾವಿರ ಲಂಚ ಕೇಳಿದ್ದರು. ಅದೃಶ್ಯ ಅವರು ಮೊದಲ ಕಂತಾಗಿ ₹40 ಸಾವಿರ ಹಣವನ್ನು ಲಕ್ಷ್ಮಣ ಅವರ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಮೂಲಕ ವರ್ಗಾಯಿಸಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್‌ ಸೆಂಟರ್‌ ಸೀಲ್‌ ತೆರವುಗೊಳಿಸಲು ಆಗದ ಕಾರಣ ಅದೃಶ್ಯ ಅವರು ತಮ್ಮ ಹಣ ಮರಳಿ ಕೇಳಿದ್ದರು. ಅ.6ರಂದು (ಶುಕ್ರವಾರ) ಹಣ ಮರಳಿ ಕೊಡುವುದಾಗಿ ಹೇಳಿದ ಲಕ್ಷ್ಮಣ, ತಮ್ಮ ಕಚೇರಿಗೆ ಬರುವಂತೆ ತಿಳಿಸಿದ್ದರು. ₹25 ಸಾವಿರ ನಗದು ಕೊಡುತ್ತೇನೆ, ಉಳಿದ ₹15 ಸಾವಿರ ಫೋನ್‌ಪೇ ಮಾಡುತ್ತೇನೆ ಎಂದು ಲಕ್ಷ್ಮಣ ಹೇಳಿದ್ದರು. ತಮ್ಮ ವಾಹನ ಚಾಲಕ ಮಹಾಂತೇಶ ಅವರ ಮುಖಾಂತರ ₹25 ಸಾವಿರ ಹಣ ಮರಳಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದರು.

ಲೋಕಾಯುಕ್ತ ಎಸ್ಪಿ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಎಸ್‌.ಪಾಟೀಲ, ತನಿಖಾಧಿಕಾರಿ ನಿರಂಜನ್ ಎಂ. ಪಾಟೀಲ, ಇನ್‌ಸ್ಪೆಕ್ಟರ್‌ಗಳಾದ ಆರ್.ಎಲ್.ಧರ್ಮಟ್ಟಿ, ಯು.ಎಸ್.ಅವಟಿ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದರು

TV24 News Desk
the authorTV24 News Desk

Leave a Reply