ಬಾಗಲಕೋಟೆ: ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಗಾಗಿ ಅಧಿಕಾರಿಗಳಿಬ್ಬರ ನಡುವೆ ವಾಗ್ವಾದ ನಡೆದಿದ್ದು, ಇಬ್ಬರೂ ಒಂದೇ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ವರ್ಗಾವಣೆಗೊಂಡಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀ ಎಮ್ಮಿ ಕರ್ನಾಟಕ ಆಡಳಿತ ಮಂಡಳಿಯಿಂದ ತಡೆಯಾಜ್ಞೆ ತಂದಿದ್ದು, ಹಾಜರಾಗಲು ಬಂದಿದ್ದಾರೆ.
ವಿಜಯಪುರದಿಂದ ವರ್ಗಾವಣೆಗೊಂಡು ಬಂದಿರುವ ಡಾ.ರಾಜಕುಮಾರ ಯರಗಲ್ ಆರೋಗ್ಯಾಧಿಕಾರಿ ಕುರ್ಚಿಯಲ್ಲಿ ಕುಳಿತಿದ್ದಾರೆ. ಹೀಗಾಗಿ, ಕುರ್ಚಿಗಾಗಿ ಕಾದಾಟ ನಡೆದಿದೆ.
ಡಾ.ರಾಜಕುಮಾರ ಮಾತನಾಡಿ, ಸರ್ಕಾರಿ ಆದೇಶದ ಪ್ರಕಾರ ಕೆಲಸ ನಿರ್ವಹಿಸುತ್ತಿದ್ದೇನೆ. ಎಮ್ಮಿ ಅವರ ವಿರುದ್ಧ ನಕಲಿ ಸಹಿ ಮಾಡಿದ ಆರೋಪವಿದೆ ಎಂದರು.
ಡಾ.ಜಯಶ್ರೀ ಎಮ್ಮಿ ಮಾತನಾಡಿ, ಕರ್ನಾಟಕ ಆಡಳಿತ ಮಂಡಳಿಯಿಂದ ತಡೆಯಾಜ್ಞೆ ತಂದಿದ್ದೇನೆ. ಅಧಿಕಾರ ವಹಿಸಿಕೊಳ್ಳುವಂತೆ ತಿಳಿಸಿದ್ದಾರೆ. ಆದರೆ, ಇಲ್ಲಿ ಅಧಿಕಾರ ನೀಡುತ್ತಿಲ್ಲ ಎಂದು ದೂರಿದರು.
ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಬಂದು ವಿಷಯದ ತನಿಖೆ ಮುಂದುವರೆಸಿದ್ದಾರೆ.