ಬೆಳಗಾವಿ: ರಾಜ್ಯ ವಿಧಾನಸಭೆಗೆ ಚುನಾವಣೆ ಮುಗಿದಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಗೋಕಾಕ ಪಟ್ಟಣದ ಹೊರ ವಲಯದ ಮಾರ್ಕಂಡೇಯ ನದಿ ಪಕ್ಕದಲ್ಲಿರುವ ಯೋಗಿ ಕೊಳ್ಳದ ಬಳಿ ಉಪಹಾರ ಸವಿದು ರಿಲ್ಯಾಕ್ಸ್ ಮೂಡ್ನಲ್ಲಿ ಸಮಯ ಕಳೆದರು.
ಸದಾ ಸರಳತೆಗೆ ಹೆಸರುವಾಸಿಯಾಗಿರುವ ಸತೀಶ್ ಜಾರಕಿಹೊಳಿ ಅವರನ್ನು ಯೋಗಿ ಕೊಳ್ಳದ ಬಳಿ ನೋಡಿದ ಯುವಕರು ಖುಷಿ ವ್ಯಕ್ತಪಡಿಸಿ, ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂತಸ ಪಟ್ಟರು.
ಕರ್ನಾಟಕ ವಿಧಾನಸಭೆ ಮತದಾನಕ್ಕೆ ಬುಧವಾರ ತೆರೆ ಬಿದ್ದಿದೆ. 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಸತೀಶ್ ಜಾರಕಿಹೊಳಿಯವರು ಕಳೆದ ನಾಲ್ಕು ತಿಂಗಳಿಂದ ದಿನದ 18 ಗಂಟೆ ರಾಜ್ಯಾದ್ಯಂತ ಸುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿಯೂ 18 ಕ್ಷೇತ್ರಗಳ ಪೈಕಿ 12ರಿಂದ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕೆಂದು ಪಕ್ಷವನ್ನು ಸಂಘಟಿಸಿದ್ದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ 122 ರಿಂದ 140 ಸ್ಥಾನಗಳಿಸಲಿದೆ ಎಂದು ಇಂಡಿಯಾ ಟುಡೇ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ತಿಳಿಸಿದೆ. ‘ನಾವು ಕೊಟ್ಟಂತ ಗ್ಯಾರಂಟಿಗಳನ್ನು ನಂಬಿ, ಬಿಜೆಪಿ ಭ್ರಷ್ಟಾಚಾರಕ್ಕೆ ಬೇಸತ್ತು ರೈತರು, ಮಹಿಳೆಯರು, ಯುವಕರು ಎಲ್ಲಾ ವರ್ಗದ ಜನ ನಮ್ಮ ಕೈ ಹಿಡಿದಿದ್ದಾರೆ. ಅತಂತ್ರ ಪರಿಸ್ಥಿತಿ ನಮಗೆ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿವೇಕೆ ಜತ್ತಿ ಸೇರಿದಂತೆ ಅನೇಕ ಮುಖಂಡರು ಇದ್ದರು.