ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ದುಡ್ಡು ಕೊಟ್ಟರೆ ಏನೆಲ್ಲ ನಡೆಯುತ್ತೆ. ಹಣ ಕೊಡುವ ಕೈದಿಗಳಿಗೆ ಏನೆಲ್ಲ ಸವಲತ್ತು ಸಿಗುತ್ತೆ. ದುಡ್ಡು ನೀಡಿದರೆ ಜೈಲು ಹೇಗೆ ಕೈದಿಗಳಿಗೆ ಐಷಾರಾಮಿ ಬಂಗಲೆಯಾಗುತ್ತೆ ಎಂಬ ಬಗ್ಗೆ ಖಾಸಗಿ ಸುದ್ದಿ ವಾಹಿನಿ ಎಳೆಯಾಗಿ ಅಕ್ರಮ ಬಯಲು ಮಾಡಿತ್ತು. ಸದ್ಯ ಈಗ ಈ ಸುದ್ದಿ ಬೆನ್ನಲ್ಲೇ ಜೈಲಿನ ಇಬ್ಬರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಕರ್ತವ್ಯ ನಿರ್ವಹಣೆ ವೇಳೆ ಬೇಜವಾಬ್ದಾರಿ ಹಿನ್ನೆಲೆ ಹೆಡ್ ವಾರ್ಡರ್ ಬಿ.ಎಲ್. ಮೇಳವಂಕಿ, ವಾರ್ಡರ್ ವಿ.ಟಿ ವಾಗಮೋರೆ ಅವರನ್ನು ಕಾರಾಗೃಹ ಉಪಮಹಾನಿರೀಕ್ಷಕ ಉತ್ತರ ವಯಲದ ಟಿ.ಪಿ ಶೇಷ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಈಗ ಮತ್ತೆ ಇದೇ ಜೈಲಿನ ಇಬ್ಬರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಹತ್ತು ಹದಿನೈದು ವರ್ಷದಿಂದ ಜೈಲಿನಲ್ಲಿ ಬೀಡು ಬಿಟ್ಟು ಬೇಕಾ ಬಿಟ್ಟಿ ಆಟವಾಡ್ತಿದ್ದ ಅಧಿಕಾರಿಗಳಿಗೆ ವರ್ಗಾವಣೆ ಶಾಕ್ ಶುರುವಾಗಿದೆ. ಓರ್ವ ಜೈಲರ್, ಓರ್ವ ಸಹಾಯಕ ಅಧೀಕ್ಷಕರನ್ನ ವರ್ಗಾವಣೆ ಮಾಡಿ ಎಡಿಜಿ ಮಾಲಿನಿ ಆದೇಶ ಹೊರಡಿಸಿದ್ದಾರೆ. ಜೈಲರ್ ಯಲ್ಲಪ್ಪ ನಾಯ್ಕ ಬಳ್ಳಾರಿ ಜೈಲಿಗೆ ಎತ್ತಂಗಡಿಯಾಗಿದ್ದಾರೆ. ಹಾಗೂ ಸಹಾಯಕ ಅಧೀಕ್ಷರಾಗಿದ್ದ ಶಹಾಬುದ್ದೀನ್ ಕಾಲೇಖಾನ್ ಅವರನ್ನು ಧಾರವಾಡ ಜೈಲಿಗೆ ವರ್ಗಾವಣೆ ಮಾಡಲಾಗಿದೆ.