ಬೆಳಗಾವಿ:ಉತ್ತರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಜೆಟ್ ಮಂಡಿಸಬೇಕು. ಈ ಭಾಗದ ಜನರು ಪ್ರತ್ಯೇಕತೆಯ ಕೂಗು ಬಾರದಂತೆ ನೋಡಿಕೊಂಡು ವಿಶೇಷ ಬಜೆಟ್ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಡಿಸಬೇಕು ಎಂದು ಗದುಗಿನ ತೋಂಟದಾರ್ಯ ಜಗದ್ಗುರು ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಹಲವಾರು ವರ್ಷಗಳಿಂದ ಸರಕಾರದ ಮುಂದೆ ಸಾಕಷ್ಟು ವಿಷಯಗಳನ್ನು ಇಡುತ್ತ ಬಂದಿದ್ದೇವೆ. ಅವು ಸಾಕರಗೊಳ್ಳದೆ ಇರುವುದು ವಿಪರ್ಯಾಸ. ಸುಮಾರು 400 ಕೋಟಿ ರೂ. ಖರ್ಚು ಮಾಡಿ ಸುವರ್ಣ ವಿಧಾನಸೌಧವನ್ನು ನಿರ್ಮಾಣ ಮಾಡಿದ್ದಾರೆ. ಅಧಿವೇಶನದಲ್ಲಿ ಮಾತ್ರ ಅದು ಉಪಯೋಗಕ್ಕೆ ಬರುತ್ತದೆ.ಬಾಕಿ ದಿನ ಖಾಲಿ ಉಳಿಯುತ್ತದೆ. ಆದ್ದರಿಂದ ಉತ್ತರ ಕರ್ನಾಟಕದಲ್ಲಿ ಬೇಕಾಗಿರುವ ಸರಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು ಹಾಗೂ ಪೂರ್ಣ ಪ್ರಮಾಣದ ಅಧಿವೇಶನವನ್ನು ಇಲ್ಲಿ ನಡೆಸಬೇಕು ಎಂದರು.ಗಡಿ ಭಾಗದಲ್ಲಿರುವ ಜಿಲ್ಲೆಗಳಿಗೆ ಸರಕಾರ ಸ್ಪಂದಿಸುವ ಕೆಲಸ ಮಾಡಬೇಕು. ಮರಾಠಿ ಭಾಗದಲ್ಲಿರುವ ಶಾಲೆಗಳಿಗೆ ಮೂಲಭೂತ ಸೌಕರ್ಯ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಶೈಕ್ಷಣಿ ಹಾಗೂ ಉದ್ಯೋಗದಲ್ಲಿ ಧನ ಸಹಾಯವನ್ನು ಸರಕಾರ ಮಾಡಬೇಕು. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು.
ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಆಯೋಗ ರಚನೆ ಮಾಡಿ ಯೋಜನೆ ರೂಪಿಸಿಕೊಳ್ಳಬೇಕು. ವಿಜಯಪುರ, ಬಾಗಲಕೋಟ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣವಾಗಿಲ್ಲ. ಗ್ರಾಮೀಣ ಭಾಗದಲ್ಲಿ ಮಕ್ಕಳ ಕೈಯಲ್ಲಿ ಸರಾಯಿ ಸೇವನೆ ಮಾಡುತ್ತಾರೆ. ವ್ಯಸನಮುಕ್ತ ಸಮಾಜ ಉಳಿಯಬೇಕಿದ್ದರೆ ಮದ್ಯಪಾನ ನಿಷೇಧ ಮಾಡಬೇಕು. ಶಾಲಾ ಆವರಣದಲ್ಲಿ ನಾಮಫಲಕ ಹಾಕಿದರೂ ಅದರ ಪಕ್ಕದಲ್ಲಿಯೇ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಸರಕಾರ ಅಕ್ರಮ ಸರಾಯಿ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದರು.
ಈ ಸಂದರ್ಭದಲ್ಲಿ ರಾಯಬಾಗದ ವಿರಕ್ತಮಠದ ಶ್ರೀ ಶಿವಾನಂದ ಸ್ವಾಮೀಜಿ, ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.