ಬೆಳಗಾವಿ: ಅತ್ತಿಗೆಯ ಜೊತೆ ಪೋನ್ ಮೂಲಕ ಸಂಪರ್ಕ ಬೆಳೆಸಿ ಅನೈತಿಕ ಸಂಬಂಧಕ್ಕೆ ತಯಾರಿ ನಡೆಸಿದ್ದ ತನ್ನ ಗೆಳೆಯನನ್ನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಮಾರಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಹುಲ್ಯಾನೂರ ಗ್ರಾಮದಲ್ಲಿ ನಡೆದಿದೆ.
ಹುಲ್ಯಾನೂರ ಗ್ರಾಮದ 19 ವರ್ಷದ ಅಭಿಷೇಕ ಅಪ್ಪಯ್ಯಾ ಬುಡ್ರಿ ಎಂಬಾತ ಕೊಲೆಯಾದ ಯುವಕ. 23 ಹುಲೇಪ್ಪಾ ಬಸ್ಸಪ್ಪಾ ಕರಿಕಟ್ಟಿ ಕೊಲೆ ಆರೋಪಿಯಾಗಿದ್ದು, ಕೊಲೆಗೆ ಅನೈತಿಕ ಸಂಬಂಧದ ಶಂಕೆಯೆ ಕಾರಣ ಎಂದು ತಿಳಿದು ಬಂದಿದೆ.
ಮೃತ ಅಭಿಷೇಕ ಹಾಗೂ ಕೊಲೆ ಆರೋಪಿ ಹುಲೆಪ್ಪಾ ಕರಿಕಟ್ಟಿ ಇಬ್ಬರು ಕುಚುಕು ಗೆಳೆಯರು. ಕೆಲ ದಿನಗಳ ಹಿಂದೆ ಅಭಿಷೇಕ ಹುಲೇಪ್ಪನ ಅತ್ತಿಗೆಯೊಂದಿಗೆ ಪೋನ್ ಮೂಲಕ ಸಂಪರ್ಕ ಬೆಳೆಸಿ ಮಾತನಾಡುತ್ತಿದ್ದ. ಈ ವಿಷಯ ಹುಲೆಪ್ಪನಿಗೆ ಗೊತ್ತಾಗುತ್ತಿದ್ದಂತೆ ಅಭಿಷೇಕಗೆ ಎಚ್ಚರಿಕೆ ನೀಡಿ ಬಿಟ್ಟಿದ್ದ. ಆದರೆ ಅಭಿಷೇಕ ಮತ್ತೆ ಬೇರೊಂದು ನಂಬರ್ ಮೂಲಕ ಮಾತುಕತೆ ಪ್ರಾರಂಭಿಸಿದ್ದ. ಇದರಿಂದ ಕೆಂಡಾಮಂಡಲವಾಗಿದ್ದ ಹುಲೇಪ್ಪ ಮತ್ತು ಅಭಿಷೇಕ ನಡುವೆ ದಿನಾಂಕ 9-8-2023 ರ ರಾತ್ರಿ ಸುಮಾರು 11:30 ಗಂಟೆಗೆ ಜಗಳ ನಡೆದಿದೆ. ಆಗ ಹುಲೇಪ್ಪ ಅಭಿಷೇಕನನ್ನು ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದನು. ಚಾಕುವಿನಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಅಭಿಷೇಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಂದು ಬೆಳಗ್ಗೆ ಅಸುನೀಗಿದ್ದಾನೆ.
ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪರಾರಿಯಾಗಿದ್ದ ಕೊಲೆ ಆರೋಪಿ ಹುಲೆಪ್ಪನನ್ನು ಮಾರಿಹಾಳ ಪಿಎಸ್ಐ ಮಂಜುನಾಥ ನಾಯಿಕ ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.