ಬೆಳಗಾವಿ : ಜಿಲ್ಲೆಯ ಚನ್ನಮ್ಮ ಕಿತ್ತೂರು ನಗರದ ಬಂಗಾರದ ಅಂಗಡಿಯಲ್ಲಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಶ್ರೀನಗರದ ಅಬುಬಕ್ಕರ ಸಿಕಂದರ ಸನದಿ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಬಂಧಿತರು. ಆರೋಪಿಗಳಿಂದ ಕಳುವು ಮಾಡಿದ್ದ 31 ಗ್ರಾಂ ಬಂಗಾರ, 1 ಕೆಜಿ ಬೆಳ್ಳಿ, ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ಮತ್ತಿತರ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಸೋಮವಾರ ಪೇಟೆಯಲ್ಲಿರುವ ಮಾನಜ್ಜ ಜುವೆಲರ್ಸನ ಶಟರ್ ಮುರಿದು ಒಳಗಿದ್ದ 1,82,500 ರೂ.ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳುವು ಮಾಡಲಾಗಿತ್ತು. ಈ ಕುರಿತು ಅಂಗಡಿ ಮಾಲೀಕ ಸುಬ್ರಹ್ಮಣ್ಯಂ ಪತ್ತಾರ ಅವರು ದೂರು ದಾಖಲಿಸಿದ್ದರು.
ಎಸ್ಪಿ ಡಾ.ಸಂಜೀವ ಪಾಟೀಲ, ಹೆಚ್ಚುವರಿ ಎಸ್.ಪಿ.ವೇಣುಗೋಪಾಲ ಮಾರ್ಗದರ್ಶನದಲ್ಲಿ ಬೈಲಹೊಂಗಲ ಡಿವೈಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ಕಿತ್ತೂರು ಸಿಪಿಐ ಮಹಾಂತೇಶ ಹೊಸಪೇಟ, ಪಿಎಸ್ಐ ಪ್ರವೀಣ ಗಂಗೋಳ ಹಾಗೂ ಪೊಲೀಸ್ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.