ಬೆಳಗಾವಿ: ನಗರದ ಸುವರ್ಣ ವಿಧಾನಸೌಧದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಅವರು, ಒಂದು ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು 20 ರಿಂದ 25 ಲಕ್ಷ ರೂ,ಗಳಿಗೆ ಮಾರಾಟ ಮಾಡಿದ್ದಾರೆ. ಅಧಿಕಾರಿಗಳು ಹೇಳುವ ಪ್ರಕಾರ ಎರಡೂ ಸಾರಿ ನೋಟಿಪಿಕೇಷನ್ ಮಾಡಿದರೂ ಜನ ಬಂದಿಲ್ಲ. ಬರದೆ ಇದ್ದರೆ ಆಕ್ಷನ್ ಮಾಡಲು ಅಧಿಕಾರ ಎನ್ನುತ್ತಾರೆ. ಆದರೆ ನಮ್ಮ ವಾದ ಅಧಿಕಾರಿಗಳಿಗೆ ಅಧಿಕಾರ ಇದೆ. ಆದರೆ ಪಕ್ಕದ ಆಸ್ತಿ ಒಂದು ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ ನೀವು ಮಾರಾಟ ಮಾಡಿದ್ದು 25 ಲಕ್ಷ. ಸುಮಾರು 100 ಕೋಟಿ ರೂ. ನಷ್ಟವಾಗಿದೆ. ಯಾವುದೇ ಕಾರಣಕ್ಕೂ ಈ ಪ್ರಕರಣ ಬಿಡುವ ಮಾತೇ ಇಲ್ಲ ಎಂದರು.ನಾಳೆಯಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ಹೊಸ ಶಿಕ್ಷಣ ನೀತಿಗೆ ನಮ್ಮ ಸರಕಾರದ ವಿರೋಧ ಇದೆ. ಪಠ್ಯಕ್ರಮದಲ್ಲಿನ ಅನಾವಶ್ಯಕವಾದ ವಿಷಯಗಳನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಶಾಲಾ ಪಠ್ಯದಲ್ಲಿ ಅನಾವಶ್ಯಕತೆಯ ವಿಷಯಗಳಿಗೆ ಕತ್ತರಿ ಹಾಕಲಾಗುವುದು ಎಂದರು.
ಆಡಳಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು. ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಜಿಲ್ಲಾ ವಿಭಜನೆಯಾಗಬೇಕು. ಈ ಮೊದಲಿನಿಂದಲೂ ನಾವು ಒತ್ತಡ ಹಾಕಿಕೊಂಡು ಬಂದಿದ್ದೇವೆ. ಸರಕಾರ ಯಾವಾಗ ಮಾಡುತ್ತದೆ ಎನ್ನುವುದನ್ನು ಕಾದುನೋಡಬೇಕು ಎಂದರು.
ಕೆಡಿಪಿ ಸಭೆಗೂ ಮುನ್ನ ಪ್ರತ್ಯೇಕ ಇಲಾಖೆಯ ಸಭೆ ನಡೆಸಲಾಗುತ್ತಿದೆ. ಜೂ.6 ರಂದು ಮಹಾನಗರ ಪಾಲಿಕೆಯ ಸಭೆ ನಡೆಸಲಾಗುತ್ತಿದೆ. ರಾಜ್ಯದ ಜನತೆ ನಮ್ಮ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದಾರೆ. ಜನ ಬಯಸುವ ಹಾಗೆ ಆಡಳಿತ ನಡೆಸಲಾಗುವುದು ಎಂದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಸಾಕಷ್ಟು ರಸ್ತೆಗಳ ಸುಧಾರಣೆಯಾಗಿಲ್ಲ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಆ ಸಮಸ್ಯೆಯನ್ನು ಬಗೆ ಹರಿಸುವ ಕೆಲಸ ಮಾಡಲಾಗುವುದು. ಹಿಂದಿನ ಸರಕಾರದ ಸಚಿವರು ಈ ಕುರಿತು ಗಮನ ಹರಿಸಬೇಕಿತ್ತು. ಅದನ್ನು ಮಾಡದೆ ಇರುವುದು ಈಗ ಸಮಸ್ಯೆಯಾಗಿದೆ. ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಎಲ್ಲಿ ಅವಶ್ಯಕತೆ ಇದೆ ಕುಡಿಯುವ ನೀರನ್ನು ಪೂರೈಕೆ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎಂದರು.ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರವಾಗಿರುವ ಕುರಿತು ಅವಶ್ಯಕ ಬಿದ್ದರೆ ಬೆಂಗಳೂರಿನಿಂದ ತನಿಖೆ ನಡೆಸಲಾಗುವುದು. ಇದಕ್ಕೆ ಸೂಕ್ತವಾದ ದಾಖಲೆ ನೀಡಿದರೇ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಇದಕ್ಕೂ ಮುನ್ನ ಸಭೆ ನಡೆಸಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಎಂದರು.
ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಸರಕಾರಿ ಕಚೇರಿ ಸ್ಥಳಾಂತರ ಮಾಡಿದರೆ ಯಾವುದೇ ಪ್ರಯೋಜನ ಇಲ್ಲ. ಬೇಕಿದ್ದರೆ ಸಚಿವ ಸಂಪುಟದ ಸಭೆ ನಡೆಸಬಹುದು. ಆರು ತಿಂಗಳಿಗೊಮ್ಮೆ ಸಭೆಯಾದರೆ ಅನಕೂಲವಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಆಸೀಫ್ ಸೇಠ್, ಮಹಾಂತೇಶ ಕೌಜಲಗಿ, ವಿಶ್ವಾಸ್ ವೈದ್ಯ, ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು