ಬೆಳಗಾವಿ : ಜಿಲ್ಲೆಯಲ್ಲಿ 12 ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. 10ರಲ್ಲಿ ಗೆಲವು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಂದು ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಗೊಂದಲ ಇದೆ. ಅದನ್ನು ಅತ್ಯರ್ಥ ಪಡಿಸಲಾಗುವುದು. ಮೊದಲನೇ ಹಂತದಲ್ಲಿ ಹಾಲಿ, ಮಾಜಿ ಶಾಸಕರೂ ಇದ್ದಾರೆ. ರಾಯಬಾಗ, ಸವದತ್ತಿಯಲ್ಲಿಯೂ ಸಾಕಷ್ಟು ಗೊಂದಲ ಇದೆ. ಅದನ್ನು ಸಂಧಾನ ಮಾಡಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.
ಗೆಲ್ಲುವ ಅಭ್ಯರ್ಥಿ, ಜನರ ಜೊತೆಗೆ ನಿಕಟ ಸಂಪರ್ಕ ಹೊಂದಿರುವವರಿಗೆ ಟಿಕೆಟ್ ನೀಡಲಾಗುವುದು. ಕೆಲ ಮತಕ್ಷೇತ್ರದಲ್ಲಿ ಗೊಂದಲ ಇದೆ. ಅದನ್ನು ಬಗೆ ಹರಿಸಲಾಗುವುದು. ಈಗಾಗಲೇ ಸಂಧಾನ ಸಭೆ ನಡೆಸಿ ಅಸಮಾಧಾನಿತರನ್ನು ಮನವೊಲಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕಳೆದ ಬಾರಿಯ ಬಂಡಾಯದಿಂದ ಸವದತ್ತಿ ಹಾಗೂ ರಾಯಬಾಗ ಕ್ಷೇತ್ರದವನ್ನು ಕಳೆದುಕೊಂಡಿದ್ದೇವು. ಆದರೆ ಈ ಸಾರಿ ಹೊಂದಾಣಿಕೆ ಮಾಡುವುದರ ಮೂಲಕ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿಯನ್ನು ಹೈಕಮಾಂಡ್ ನೀಡಿದೆ ಎಂದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಗೆ ಬರುವ ಮಾಹಿತಿ ಇಲ್ಲ. ಆದರೆ ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸಮರ್ಥವಾಗಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ರಾಮದುರ್ಗ ಮತಕ್ಷೇತ್ರದಲ್ಲಿ ಯಾವುದೇ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಇಲ್ಲ. ಕೆಲವರು ಸುದ್ದಿಗೋಷ್ಠಿ ನಡೆಸಿ ನಾನು ರಾಮದುರ್ಗದ ಬಂಡಾಯದ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅವರು ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ ಎಂದು ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವರುಣಾ ಮತಕ್ಷೇತ್ರದ 40 ವರ್ಷಗಳಿಂದ ಕೈ ಹಿಡಿದಿದೆ. ಅವರ ಗೆಲುವಿಗೆ ಶ್ರಮಿಸುವ ಅಗತ್ಯ ಇಲ್ಲ. ಅವರು ಗೆದ್ದೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸಮರ್ಥವಾದ ಕಾಂಗ್ರೆಸ್ ಅಭ್ಯರ್ಥಿಯನ್ನು ಸ್ಥಳೀಯರಿಗೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಹೊರಗಿನಿಂದ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಮಕನಮರಡಿ ಮತಕ್ಷೇತ್ರದ ಈ ಬಾರಿ ಪ್ರಚಾರ ನಡೆಸುತ್ತೇನೆ. ಇಲ್ಲದಿದ್ದರೇ ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಾರೆ. ಕಳೆದ ಬಾರಿಯೂ ಅಪಪ್ರಚಾರ ಮಾಡಿದ್ದರಿಂದ ಗೆಲುವಿನ ಅಂತರ ಕಡಿಮೆಯಾಗಿತ್ತು.ಆದ್ದರಿಂದ ಈ ಬಾರಿ ಪ್ರಚಾರಕ್ಕೆ ಹೋಗುತ್ತೇನೆ. ಅಲ್ಲದೆ ಚುನಾವಣೆಯ ಪ್ರಚಾರದ ವಾಹನವನ್ನು ಸ್ಮಶಾನದಲ್ಲಿ ಪೂಜೆ ಸಲ್ಲಿಸಿ ಪ್ರಾರಂಭಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಶಾಸಕರ ಹೆಸರಿನಲ್ಲಿ ಹಣ ಮಾಡುವವರು ಸಾಕಷ್ಟು ಜನ ಇರುತ್ತಾರೆ. ಅದರಲ್ಲಿ ಅವರು ಎಷ್ಟು ಶಾಮಿಲಾಗಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದು ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಸುನೀಲ ಹನುಮಣ್ಣವರ, ರಾಜೇಂದ್ರ ಪಾಟೀಲ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ ಚಿಂಗಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.