ಬೆಳಗಾವಿ: ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜಯೇಶ ಪೂಜಾರಿಯನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿನಿಂದ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಜಯೇಶ ಪೂಜಾರಿ ಉರ್ಫ್ ಜಯೇಶ ಕಾಂತ ಈತನ ವಿರುದ್ಧ ಮಹಾರಾಷ್ಟ್ರದ ದಾಂತೋಳ್ಳಿ ಪೊಲೀಸ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಆರೋಪಿ ಜಯೇಶ ಪೂಜಾರಿಯನ್ನು ಹಿಂಡಲಗಾ ಜೈಲಿನಿಂದ ಬಂಧಿಸಿ ಇಂದು ಮುಂಜಾನೆ ಪೊಲೀಸರು ವಿಮಾನದ ಮೂಲಕ ನಾಗ್ಪುರಗೆ ಕರೆದುಕೊಂಡು ಹೋಗಿದ್ದಾರೆ. ಕೇಂದ್ರ ಸಚಿವ ಗಡ್ಕರಿ ಬೆದರಿಕೆ ಕರೆಗಳನ್ನು ಮಾಡುವ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಲು ಜಯೇಶನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ನಾಗ್ಪುರ್ ಪೊಲೀಸರು ತಿಳಿಸಿದ್ದಾರೆ.
ಕೆಲ ವಾರಗಳ ಹಿಂದೆ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ, ಅದೇ ಸ್ಥಳದಿಂದ ಗಡ್ಕರಿ ಅವರ ಕಚೇರಿಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ.
ಎರಡನೇ ಬಾರಿಗೆ ಸಚಿವರ ಕಚೇರಿಗೆ ದೂರವಾಣಿ ಕರೆ ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಗಳ ತಂಡ ಹಿಂಡಲಗಾ ಕಾರಾಗೃಹದಲ್ಲಿ ತಪಾಸಣೆ ನಡೆಸಿತು.ಮೂಲಗಳ ಪ್ರಕಾರ, ಕರೆ ಮಾಡಿದವರು ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಕೋಟ್ಯಂತರ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಗಡ್ಕರಿ ಅವರ ಕಚೇರಿಯಲ್ಲಿ ಕರೆ ಸ್ವೀಕರಿಸುವವರಿಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಆರೋಪಿ ಜಯೇಶ ಪೂಜಾರಿ ವಿಚಾರಣೆಗೆ ಒಳಪಡಿಸಿ ನಾಗ್ಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







