ಬೆಳಗಾವಿಬೆಳಗಾವಿ ನಗರ

ಬೆಳಗಾವಿ  ವಕೀಲರಿಗೆ ಥಳಿತ ; ವಕೀಲರಿಂದ ಪ್ರತಿಭಟನೆ 

ಬೆಳಗಾವಿ:  ವಕೀಲರೊಬ್ಬರಿಗೆ ಪೊಲೀಸರು ಥಳಿಸಿರುವುದನ್ನು ವಿರೋಧಿಸಿ ಇಂದು ಬೆಳಗಾವಿಯಲ್ಲಿ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಮುಂಭಾಗ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಲಾಯಿತು.
 ರಾಮದುರ್ಗ ಮೂಲದ  ವಕೀಲ ಈರಣ್ಣ ಪೂಜಾರಿ ಪ್ರಸ್ತುತ ಬೆಳಗಾವಿಯಲ್ಲಿ ವೃತ್ತಿ ನಡೆಸುತ್ತಿದ್ದು, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಠಾಣೆಯ ಹಿಂದೆ ವಾಹನ ನಿಲ್ಲಿಸಿದ್ದರು. ಈ ವೇಳೆ ಮಹಿಳಾ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ ವಾಹನ ತೆಗೆಯುವಂತೆ ಹೇಳಿದ್ದಾರೆ. ವಾದ  ವಿವಾದ ನಡೆದು ಮಹಿಳಾ ಕಾನ್ಸ್ಟೇಬಲ್ ಇಬ್ಬರು ಪುರುಷ ಪೊಲೀಸರೊಂದಿಗೆ ಆಗಮಿಸಿ ಯುವ ನ್ಯಾಯವಾದಿಯನ್ನು ಥಳಿಸಿದ್ದಾರೆ ಎಂದು ಆರೋಪಿಸಿ ವಕೀಲರು ಪ್ರತಿಭಟನೆ ನಡೆಸಿದರು. ಜೆಎಂಎಫ್ಸಿ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ವಕೀಲರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ವಕೀಲ ಆರ್. ಪ. ಪಾಟೀಲ್ ಅವರು ವಕೀಲರ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಬೆಳಗಾವಿಯಲ್ಲಿ ಪೊಲೀಸ್ ವ್ಯವಸ್ಥೆ ಹಾಳಾಗಿದೆ. ವಕೀಲರನ್ನು ಪೊಲೀಸರು ಥಳಿಸಿದ ಘಟನೆಗಳು ನಡೆಯುತ್ತಿವೆ. ಎಂಟು ದಿನಗಳ ಹಿಂದೆಯಷ್ಟೇ ಶಹಾಪುರದಲ್ಲಿ ಮಹಿಳಾ ವಕೀಲರೊಬ್ಬರಿಗೆ ಪೊಲೀಸರು ಥಳಿಸಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಆ ನಂತರ ಇದು ಎರಡನೇ ಘಟನೆಯಾಗಿದೆ. ಸಿಇಎನ್ ಸೆಲ್ ನ ಇಬ್ಬರು ಪೊಲೀಸರು ವಿನಾಕಾರಣ ಥಳಿಸಿದ್ದರಿಂದ ಪೂಜಾರಿ ತೀವ್ರವಾಗಿ ಗಾಯಗೊಂಡಿದ್ದರು. ಬೆಳಗಾವಿ ಪೊಲೀಸ್ ಕಮಿಷನರೇಟ್ ಆದಾಗಿನಿಂದ ಬೆಳಗಾವಿಯಲ್ಲಿ ಪೊಲೀಸರು ಹಿಟ್ಲರ್ ಆಡಳಿತ ಆರಂಭಿಸಿದ್ದಾರೆ. ಅವರು ಯಾರ ಕೈಗೊಂಬೆಯಾಗಿ ಕೆಲಸವನ್ನು ಮಾಡುತ್ತಿದ್ದಾರೆಂದು ಆರೋಪಿಸಿದರು.
ಈ ನಡುವೆ ನ್ಯಾಯವಾದಿ ಪಾಟೀಲ್ ಅವರಿಗೆ ಪೊಲೀಸ್ ಕಮಿಷನರೇಟ್ ನಿಂದ ದೂರವಾಣಿ ಕರೆ ಬಂದಿದೆ. ಪೊಲೀಸರ ವರ್ತನೆ ಕುರಿತು ಕ್ಷಮಿಸುವಂತೆ ಮನವಿ ಮಾಡಿದ್ದಾರೆ ಎಂದು ಅವರು , ಮೊದಲು ತಪ್ಪು ಮಾಡಿ ನಂತರ ಕ್ಷಮೆ ಕೇಳುವುದರ ಅರ್ಥವೇನು? ನ್ಯಾಯವಾದಿಗೆ ಥಳಿಸಿದ ಪೊಲೀಸರು ಕ್ಷಮೆ ಯಾಚಿಸಬೇಕು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಮುಂದೆ ಇಂತಹ ಘಟನೆಗಳು ನಡೆದರೆ ವಕೀಲರು ಸುಮ್ಮನಿರುವುದಿಲ್ಲ, ಇನ್ನಷ್ಟು ತೀವ್ರ ಆಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಇದೇ ವೇಳೆ ಸಿಪಿಐ ಹಾಗೂ ಡಿಸಿಪಿ ಶೇಖರ್ ಪ್ರತಿಭಟನಾ ನಿರತ ವಕೀಲರನ್ನು ಭೇಟಿ ಮಾಡಿ ಪ್ರತಿಭಟನೆ ತಿಳಿಗೊಳಿಸಿದರು. ಆದರೆ ವಕೀಲರು ಅವರ ಮಾತನ್ನು ಕೇಳಲಿಲ್ಲ. ಆ ಬಳಿಕ ವಕೀಲರ ಸಂಘದ ಕಚೇರಿಗೆ ಥಳಿಸಿದ ಇಬ್ಬರು ಪೊಲೀಸರನ್ನು ಕರೆಸಲಾಯಿತು. ಘಟನೆಗೆ ಸಂಬಂಧಿಸಿದಂತೆ ವಕೀಲರ ಬಳಿ ಕ್ಷಮೆ ಯಾಚಿಸಿದ ನಂತರ ಪ್ರಕರಣವನ್ನು ಕೈಬಿಡಲಾಯಿತು.
TV24 News Desk
the authorTV24 News Desk

Leave a Reply