ಬೆಳಗಾವಿಬೆಳಗಾವಿ ನಗರ

ಮಾದಕವಸ್ತು ಮಾರಾಟ-ಸಾಗಾಣಿಕೆಗೆ ಕಡಿವಾಣ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ 

ಬೆಳಗಾವಿ: ಮಾದಕವಸ್ತುಗಳ ಮಾರಾಟ, ಸಾಗಾಣಿಕೆ ಹಾಗೂ ಸೇವನೆ ತಡೆಗಟ್ಟಲು ಕಡಿವಾಣ ಹಾಕುವ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಇಂದು ಸೂಚನೆ ನೀಡಿದರು.ಮಾದಕವಸ್ತುಗಳ ಮಾರಾಟ-ಸಾಗಾಣಿಕೆ ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು  ನಡೆದ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಸತಿನಿಲಯಗಳಲ್ಲಿ ತಪಾಸಣೆ ನಡೆಸಬೇಕು. ಹೆದ್ದಾರಿ ಪಕ್ಕದ ಡಾಬಾ, ಹೋಟೆಲ್ ಗಳ ಮೇಲೆ ನಿಗಾ ವಹಿಸಬೇಕು.
ಹೊಲಗದ್ದೆಗಳಲ್ಲಿ ಗಾಂಜಾ ಬೆಳೆ ಬಗ್ಗೆ ಮಾಹಿತಿಯನ್ನು ಕಲೆಹಾಕಬೇಕು. ವೈದ್ಯರ ಚೀಟಿ ಇಲ್ಲದೇ ಯಾವುದೇ ತರಹದ ಔಷಧಿ ಮಾರಾಟ ಮಾಡದಂತೆ ನಿಗಾ ವಹಿಸಬೇಕು.
ಮಾದಕವಸ್ತುಗಳ ಸೇವನೆಯಿಂದ ಯುವಸಮುದಾಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದರು.ಇದೇ ವೇಳೆ ಮಾತನಾಡಿದ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, “ಮಾದಕವಸ್ತು ಸಾಗಾಣಿಕೆ, ಮಾರಾಟ ತಡೆಯುವುದು ಕೇವಲ ಪೊಲೀಸ್‌ ಇಲಾಖೆಯ ಕೆಲಸ ಎಂದುಕೊಳ್ಳಬಾರದು. ಅಬಕಾರಿ, ಅರಣ್ಯ, ಕೃಷಿ, ಆರೋಗ್ಯ ಮತ್ತಿತರ ಇಲಾಖೆಗಳು ಕೂಡ ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜತೆ ಕೈಜೋಡಿಸಬೇಕು” ಎಂದರು.ಮಾದಕವಸ್ತುಗಳ ಬಗ್ಗೆ ಯಾವುದೇ ಮಾಹಿತಿ ದೊರೆತರೂ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.ಡಿಎಫ್ಓ ಹರ್ಷಭಾನು ಸೇರಿದಂತೆ ಕೃಷಿ, ಅರಣ್ಯ, ಆರೋಗ್ಯ,ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply