ಬೆಳಗಾವಿ: ಹುಬ್ಬಳ್ಳಿ ಕಿಮ್ಸ್ ಮಾದರಿಯಲ್ಲಿ ಬೆಳಗಾವಿಯ ಬಿಮ್ಸ್ ಬೆಳೆಯಬೇಕೆಂಬ ಉದ್ದೇಶ ನನ್ನದು. ಆ ದೂರದೃಷ್ಟಿ ಇಟ್ಟುಕೊಂಡು ನಾವೆಲ್ಲರೂ ಕೆಲಸ ಮಾಡಬೇಕು. ಇದನ್ನು ಸಾಕಾರಗೊಳಿಸುವ ಜವಾಬ್ದಾರಿ ಆಸ್ಪತ್ರೆ ನಿರ್ದೇಶಕರ ಮೇಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅವರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 100 ಹಾಸಿಗೆಗಳ ತಾಯಿ – ಮಕ್ಕಳ ಆಸ್ಪತ್ರೆ ಹಾಗೂ 50 ಬೆಡ್ ಗಳ ಐಸಿಯು ಘಟಕ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು
ಹಳ್ಳಿಗರು ಹಣ ಇಲ್ಲದೇ ಆಸ್ಪತ್ರೆಗೆ ಹೋಗುವುದಿಲ್ಲ. ಮಹಿಳೆಯರಿಗೆ ಎದೆ ನೋವು ಕಾಣಿಸಿಕೊಂಡರೆ ಎರಡು ದಿನ ಅಮೃತಾಂಜನ ಹಚ್ಚಿಕೊಂಡು ಮಲಗಿಕೊಂಡು ಬಿಡುತ್ತಾರೆ. ಅವರಿಗೆ ಸೂಕ್ತ ಸಮಯದಲ್ಲಿ ಆರೋಗ್ಯ ಸೇವೆ ದೊರೆತರೆ ಅವರ ಆರೋಗ್ಯ ಸುಧಾರಿಸುತ್ತದೆ. ಹೊಲದಲ್ಲಿ ಕೂಲಿ ಮಾಡುವ ತಾಯಿ ತನ್ನ ಮಗುವಿಗೆ ಯಾವುದೇ ಪೌಷ್ಟಿಕ ಆಹಾರ ಕೊಡುವುದಿಲ್ಲ. ತಾಯಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆತರೆ ಬಹಳಷ್ಟು ರೋಗಗಳು ದೂರವಾಗುತ್ತದೆ. ಅಪೌಷ್ಟಿಕತೆ ದೇಶಕ್ಕೆ ದೊಡ್ಡ ಮಟ್ಟದ ಸಮಸ್ಯೆಗೆ ಕಾರಣಗಲಿದೆ. ಪೌಷ್ಟಿಕತೆಗೆ ನಮ್ಮ ಸರ್ಕಾರ ವಿಶೇಷ ಆಹಾರ ನೀಡಲಾಗುತ್ತಿದೆ. ಆರು ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಇದೆ. ಅದು ರಾಜ್ಯದ ಸರಾಸರಿ ಬರುವವರೆಗೂ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಹಲವಾರು ಯೋಜನೆಯನ್ನು ಪ್ರಥಮ ಬಾರಿ ಮಾಡುತ್ತಿದ್ದೇವೆ. ಸಿಎಂ ಆರೋಗ್ಯ ತಪಾಸಣೆ ಯೋಜನೆಯಡಿ 5 ಜಿಲ್ಲೆಗಳಲ್ಲಿ ಮೊಬೈಲ್ ಆರೋಗ್ಯ ಚೆಕ್ ಅಪ್ ವಾಹನ ಮೂಲಕ ತಪಾಸಣೆ ಮಾಡಲಾಗುತ್ತದೆ. 60 ವರ್ಷ ಮೀರಿದ ಎಲ್ಲರಿಗೂ ಉಚಿತ ಕಣ್ಣಿನ ತಪಾಸಣೆ ಮಾಡಿ ಕನ್ನಡಕ ನೀಡಲಾಗುತ್ತದೆ. ಬಡವರಿಗೆ ಬೆಳಕನ್ನು ಕೊಡಬೇಕೆಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ಜತೆಗೆ ಹುಟ್ಟು ಕಿವುಡರಿಗೆ ವಿಶೇಷ ಸಾಧನವನ್ನು ಇಂಪ್ಲಾಂಟ್ ಮಾಡುವ 500 ಕೋಟಿ ರೂ ಮೊತ್ತದ ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು