ಬೆಳಗಾವಿ: ಮಹಾರಾಷ್ಟ್ರದ ನಡೆಸುತ್ತಿರುವ ಪುಂಡಾಟಿಕೆಯನ್ನು ವಿರೋಧಿಸಿ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ರ್ಯಾಲಿ ಮಾಡಿ ಸಾವಿರಾರು ಕನ್ನಡದ ಧ್ವಜ ಹಾರಿಸಲು ಮಂಗಳವಾರ ಆಗಮಿಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ಹಿರೇಬಾಗೇವಾಡಿ ಟೋಲ್ ಗೆಟ್ ಬಳಿ ಬಂಧಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ನಾನು ಬೆಳಗಾವಿಗೆ ಬರುವಾಗ ಬಿಡುವುದಿಲ್ಲ ಎಂದರೆ ಇವರು ನಮ್ಮ ಪೊಲೀಸ್ ರಲ್ಲವೇ ? .ಬೆಳಗಾವಿ ಪೊಲೀಸರು ಕನ್ನಡಿಗರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ. ಕರವೇ ಕಾರ್ಯಕರ್ತರನ್ನು ಬೆಳಗಾವಿ ಪ್ರವೇಶ ಮಾಡದಂತೆ ತಡೆ ಹಿಡಿದಿರುವ ಕುರಿತು ಗೃಹ ಸಚಿವ ಆರಗ್ ಜ್ಞಾನೇಂದ್ರ ಅವರೊಂದಿಗೆ ಚರ್ಚೆ ನಡೆಸುವೆ. ನಾವು ಮಹಾರಾಷ್ಟ್ರಕ್ಕೆ ಹೊಗುತ್ತಿಲ್ಲ ಸ್ವಾಮಿ. ನಾನು ಕರ್ನಾಟಕದ ಬೆಳಗಾವಿಗೆ ಹೊಗುತ್ತಿರುವುದು. ನಮ್ಮನ್ನು ನಡುರಸ್ತೆಯಲ್ಲಿಯೇ ತಡೆಯುವ ಪೊಲೀಸರ ನಡೆ ಸರಿಯಾದುದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಮಹಾರಾಷ್ಟ್ರದ ಪುಂಡರಿಗೆ ಪಾಠ ಕಲಿಸಲು ಸಾವಿರಾರು ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸುವ ಸಂದರ್ಭದಲ್ಲಿ ಪೊಲೀಸರು ಹಿರೇಬಾಗೇವಾಡಿಯಲ್ಲಿ ಬಂಧಿಸಿರುವ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಹಾದೇವ ತಳವಾರ , ಸುರೇಶ ಗವನ್ನವರ, ಗಣೇಶ ರೋಕಡೆ, ರುದ್ರಗೌಡ ಪಾಟೀಲ, ಮಹೇಶ ಹಟ್ಟಿಹೊಳಿ, ಬಾಳು ಜಡಗಿ ರಮೇಶ ತಳವಾರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.