

ಬೆಳಗಾವಿ : ರಾಜ್ಯದ ಎರಡನೇ ರಾಜಧಾನಿ ಎಂದೇ ಪರಿಗಣಿಸಲ್ಪಡುವ ಬೆಳಗಾವಿ
ನಗರದ ಸೌಂದರ್ಯೀಕರಣ ಹಾಗೂ ಮೂಲಭೂತ ಸೌಲಭ್ಯ ಒದಗಿಸಲು ಹಾಗೂ ಇಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದ ಖರ್ಚು ವೆಚ್ಚಕ್ಕಾಗಿ ಬೆಳಗಾವಿ ಮಹಾನಗರ ಪಾಲಿಕೆಗೆ
ರೂ.250 ಕೋಟಿ ವಿಶೇಷ ಅನುದಾನವನ್ನು ನೀಡಬೇಕೆಂದು ಕೋರಿ
ಇತ್ತೀಚೆಗೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆಗಾಗಿ ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮೇಯರ್ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹಣಮಂತ ಕೊಂಗಾಲಿ ಸುವರ್ಣ ವಿಧಾನಸೌಧದಲ್ಲಿ ಮನವಿ ಅರ್ಪಿಸಿದರು.
ಬೆಳಗಾವಿಯಲ್ಲಿ ಪ್ರತಿ ವರ್ಷ ನಡೆಯುವ ವಿಧಾನ ಮಂಡಲ ಅಧಿವೇಶನದ ಖರ್ಚು ವೆಚ್ಚಗಳಿಗಾಗಿ ಜಿಲ್ಲಾಡಳಿತಕ್ಕೆ ಪಾಲಿಕೆಯಿಂದ ಅನುದಾನ ನೀಡಲಾಗುತ್ತಿದೆ. ಎರಡನೇ ರಾಜಧಾನಿ ಹಾಗೂ ಬೆಳೆಯುತ್ತಿರುವ ಬೆಳಗಾವಿಗೆ ಸೌಂದರ್ಯೀಕರಣಗೊಳಿಸುವುದರ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅಗತ್ಯವೂ ಇದೆ. ಸಿಬ್ಬಂದಿಯ ವೇತನವನ್ನೂ ಭರಿಸಬೇಕು . ಇದೆಲ್ಲಕ್ಕೂ ಪಾಲಿಕೆ ಆದಾಯವನ್ನೇ ಅವಲಂಬಿಸುತ್ತಿರುವುದರಿಂದ ನಿಭಾಯಿಸುವುದು ಕಷ್ಟ ಸಾಧ್ಯವಾಗಿದೆ. ಅದಕ್ಕಾಗಿಯೇ ವಿಶೇಷ ಅನುದಾನದ ಅಗತ್ಯವಿದೆ.
ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನಗರದ ಅಭಿವೃದ್ಧಿಗಾಗಿ ಪಾಲಿಕೆಗೆ ರೂ. 200 ಕೋಟಿ ಅನುದಾನವನ್ನು ನೀಡಿದ್ದರು. ಆದರೆ 2026-27ನೇ ಸಾಲಿನ ಶೇ. 15ರಷ್ಟು ಸರ್ಕಾರದಿಂದ ಬಿಡುಗಡೆಯಾಗಬೇಕಾದ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ. ಏಳನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಪಾಲಿಕೆಯ ಸಿಬ್ಬಂದಿ ವೇತನಕ್ಕಾಗಿ ರೂ.4863 ಲಕ್ಷ ಬೇಡಿಕೆ ಇರಿಸಲಾಗಿದ್ದು, ಆದರೆ ಸರ್ಕಾರದಿಂದ ರೂ. 3890 ಲಕ್ಷ ಮಾತ್ರ ಹಂಚಿಕೆಯಾಗಿದೆ.2025-26 ಸಾಲಿನಲ್ಲೂ ಶೇ.15 ರಷ್ಟು ಕಡಿಮೆ ಅನುದಾನ ನೀಡಿರುವುದರಿಂದ ವ್ಯತ್ಯಾಸದ ಮೊತ್ತವನ್ನು ಸರಿದೂಗಿಸಲು ಮತ್ತು ಹೊರಗುತ್ತಿಗೆ ನೌಕರರಿಗೂ ಸಹ ಪಾಲಿಕೆ ನಿಧಿಯಿಂದಲೇ ವೇತನ ಪಾವತಿಸಲಾಗುತ್ತಿದೆ. ಇದೆಲ್ಲವೂ ಪಾಲಿಕೆಗೆ ಆರ್ಥಿಕ ಹೊರೆಯನ್ನುಂಟು ಮಾಡುತ್ತಿದೆ. ಜನಸಂಖ್ಯೆ ಹೆಚ್ಚಳದಿಂದಾಗಿ ಹೆಚ್ಚಿನ ಸಂಖ್ಯೆಯ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಅಗತ್ಯವೂ ಇದೆ . ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿ ಸಂಗ್ರಹಾಲಯ ನಿರ್ಮಾಣಕ್ಕಾಗಿ ಸ್ಥಳ ಖರೀದಿಸಬೇಕು.ಈ ಎಲ್ಲ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಅನುದಾನದ ಅಗತ್ಯವಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು ಈ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದು, ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಮೇಯರ್ ಉಪಮೇಯರ್ ತಿಳಿಸಿದ್ದಾರೆ.









