ಬೆಳಗಾವಿ: ನಗರದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಮಾರಸ್ವಾಮಿ ಬಡಾವಣೆಯು ಈಗ ಕಳ್ಳರ ಪಾಲಿಗೆ ಸುಲಭದ ತಾಣವಾಗಿ ಮಾರ್ಪಟ್ಟಿದೆ. ಗುರುವಾರ ಜೂನ್ 25 ರಂದು ಬಡಾವಣೆಯಲ್ಲಿ ಎರಡು ಕಳ್ಳ ಪ್ರಕರಣಗಳು ಕಂಡು ಬಂದಿವೆ. ಕೇವಲ ಎರಡು ತಿಂಗಳಲ್ಲಿ ಈ ಭಾಗದಲ್ಲಿ ಬರೋಬ್ಬರಿ ಐದು ಕಳ್ಳತನ ಪ್ರಕರಣಗಳು ಹಾಗೂ ನಾಲ್ಕು ಕಳ್ಳತನದ ಯತ್ನಗಳು ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭೀತಿ ಹುಟ್ಟಿಸಿದೆ ಸಿಸಿಟಿವಿಯಲ್ಲಿದ್ದರೂ ಸಿಗದ ಕಳ್ಳರು ಬಡಾವಣೆಯ ಮನೆಗಳ ಮುಂದೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಳ್ಳರು ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವುದು ಮತ್ತು ಕಳ್ಳತನಕ್ಕೆ ಯತ್ನಿಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಎಲ್ಲ ಆಧಾರಗಳನ್ನು ಪೊಲೀಸರಿಗೆ ನೀಡಲಾಗಿದ್ದರೂ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಎಪಿಎಂಸಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಪೊಲೀಸ್ ಗಸ್ತು ಹೆಚ್ಚಿಸಲು ಆಗ್ರಹ:
“ರಾತ್ರಿ ವೇಳೆ ಬಡಾವಣೆಯಲ್ಲಿ ಪೊಲೀಸರ ಗಸ್ತು ಹೆಚ್ಚಿಸದೇ (Patrolling) ಇರುವುದು ಕಳ್ಳರಿಗೆ ವರವಾಗಿದೆ. ಕಳ್ಳತನ ಹೆಚ್ಚುತ್ತಿದ್ದರೂ ಕಳ್ಳರನ್ನು ಪತ್ತೆ ಹಚ್ಚುವ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಸ್ಥಳೀಯ ನಿವಾಸಿಗಳು ದೂರುತ್ತಿದ್ದಾರೆ.
ಸರಣಿ ಕಳ್ಳತನಗಳಿಂದ ಬೇಸತ್ತಿರುವ ಸಾರ್ವಜನಿಕರು, ಪೊಲೀಸ್ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ರಾತ್ರಿ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಬೇಕು ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಳ್ಳರನ್ನು ಜೈಲಿಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.









