

ಬೆಳಗಾವಿ:
ಜವರಾಯ ಯಾರನ್ನು ಹೇಗೆ ಬಂದು ಕರೆದುಕೊಂಡು ಹೋಗುತ್ತಾನೆ ಗೊತ್ತೆ ಆಗುವುದಿಲ್ಲ. ನಾಯಿಯ ಪ್ರಾಣ ಉಳಿಸಲು ಹೋಗಿ ಬೈಕ್ ಮೇಲೆ ಹಿಂಬದಿ ಸವಾರಿ ಮಾಡುತ್ತಿದ್ದ ತಾಯಿಯ ಪ್ರಾಣವೇ ಹೋಗಿದೆ. ತಾಯಿ ಮಗ ಬೈಕ್ ಮೇಲೆ ಬರುತ್ತಿದ್ದ ವೇಳೆ ಬೀದಿ ನಾಯಿ ಅಡ್ಡ ಬಂದು ನಾಯಿ ಉಳಿಸಲು ಹೋಗಿ ಅವಾಂತರವಾಗಿದೆ. ಬೈಕ್ ಬ್ರೇಕ್ ಹಾಕಿದ ಕೂಡಲೇ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.ಪಂತಬಾಳೇಕುಂದ್ರಿ ಗ್ರಾಮದಿಂದ ಮಹಾಂತೇಶ ನಗರಕ್ಕೆ ಬೈಕ್ನಲ್ಲಿ ತಾಯಿ ಮಗ ಬರುತ್ತಿದ್ದರು ಎನ್ನಲಾಗಿದೆ. ಮಗ ಮಹಾಂತೇಶ ಕಲ್ಮಠ ಹಾಗೂ ಅವರ ತಾಯಿ ಶಾಂತವ್ವ ಕಲ್ಮಠ ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಮನೆ ಕಡೆ ಹೊರಟಿದ್ದರು ಎನ್ನಲಾಗಿದೆ ಈ ವೇಳೆ ಸಾಂಬ್ರಾ ಗ್ರಾಮದ ಸಮೀಪ ಬಂದಾಗ ಏಕಾಏಕಿ ಬೀದಿ ನಾಯಿ ಬೈಕಿಗೆ ಅಡ್ಡ ಬಂದಿದೆ ಎನ್ನಲಾಗಿದೆ. ಈ ವೇಳೆ ಪ್ರಾಣಿಯ ಜೀವ ಉಳಿಸಬೇಕೆಂಬ ಉದ್ದೇಶದಿಂದ ಅದಕ್ಕೆ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು ಮಹಾಂತೇಶ ತಕ್ಷಣ ಬೈಕ್ಗೆ ಬ್ರೇಕ್ ಹಾಕಿದ್ದಾರೆ. ಆದರೆ ಬ್ರೇಕ್ ಹಾಕಿದ ತೀವ್ರತೆಗೆ ಹಿಂಬದಿಯಲ್ಲಿ ಕುಳಿತಿದ್ದ ಶಾಂತವ್ವ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗನೊಂದಿಗೆ ಮಾತನಾಡುತ್ತಾ ಮನೆಯತ್ತ ಬರುತ್ತಿದ್ದ ತಾಯಿ ಕ್ಷಣಾರ್ಧದಲ್ಲಿಯೇ ಸಾವನ್ನಪ್ಪಿದ್ದು ದುರಂತವೇ ಸರಿ. ಮುಂದಿನ ಕ್ಷಣವೇ ಜೀವ ಕಳೆದುಕೊಂಡಿದ್ದು ಕುಟುಂಬದವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










