
ರಾಯಭಾಗ: ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯ್ತಿ ಕಾರ್ಯಾಲಯಕ್ಕೆ ರಾತೋರಾತ್ರಿ ಖದೀಮರು ಕನ್ನ ಹಾಕಿದ್ದಾರೆ.ಇಷ್ಟು ದಿನಗಳ ಕಾಲ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖದೀಮರು ಈಗ ಸರ್ಕಾರಿ ಕಚೇರಿಗಳನ್ನೂ ಸಹ ಬಿಡ್ತಿಲ್ವಾ ಎಂದು ಜನ ಮಾತನಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ತಡರಾತ್ರಿ ಚಿಂಚಲಿ ಪಟ್ಟಣ ಪಂಚಾಯ್ತಿಯ ಬಾಗಿಲು ಮುರಿದು ಒಳಗಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಗೋಡೆಗಳತ್ತ ಮುಖ ಮಾಡಿ ಕಚೇರಿಯ ಬೀರುವಿನಲ್ಲಿದ್ದ ಠರಾವು ಪುಸ್ತಕಗಳನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ. ಈ ಘಟನೆಯಿಂದ ಚಿಂಚಲಿ ಪಟ್ಟಣದ ಜನ ಬೆಚ್ಚಿ ಬಿದ್ದಿದ್ದಾರೆ.ಇಂದು ಮುಂಜಾನೆ ಎಂದಿನಂತೆ ಪೌರ ಕಾರ್ಮಿಕರು ಪಟ್ಟಣ ಪಂಚಾಯ್ತಿಯ ಆವರಣದಲ್ಲಿ ಕಸಗೂಡಿಸಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಧ್ಯ ಘಟನಾ ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಭದ್ರತೆ ಇಲ್ಲದಿರುವಾಗ ಇನ್ನು ಸಾಮಾನ್ಯರ ಆಸ್ತಿಪಾಸ್ತಿಗಳ ಗತಿ ಎನು ಎಂದು ಜನ ಗೊಣಗುತ್ತಿದ್ದಾರೆ.