ಮೂಡಲಗಿ: ಮೂಡಲಗಿಗೆ ಉಪನೋಂದಣಿ ಅಧಿಕಾರಿಗಳ ಕಛೇರಿಯನ್ನು ಆರಂಭಿಸುವ ಮೂಲಕ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ಮತ್ತು ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಬಳಿ ಸೋಮವಾರ ನೂತನವಾಗಿ ಆರಂಭಗೊಂಡಿರುವ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಕ್ಟೋಬರ ತಿಂಗಳಾಂತ್ಯಕ್ಕೆ ಮೂಡಲಗಿಯಲ್ಲಿ ಕಛೇರಿಯ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರು ಹಾಗೂ ರೈತರಿಗೆ ನೀಡಿದ ವಾಗ್ದಾನದಂತೆ ನಡೆದುಕೊಂಡಿರುವುದಾಗಿ ಅವರು ಹೇಳಿದರು.
ರಾಜ್ಯದಲ್ಲಿ ಮೂಡಲಗಿ ಹೊಸ ತಾಲೂಕಿಗೆ ಮಾತ್ರ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭಿಸಲಿಕ್ಕೆ ಸರಕಾರ ಅನುಮತಿ ನೀಡಿದೆ. ಉಳಿದ ಯಾವ ಹೊಸ ತಾಲೂಕಿಗೂ ಈ ಕಛೇರಿ ಆರಂಭಿಸಲಿಕ್ಕೆ ಸರಕಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಮತಿ ನೀಡಿಲ್ಲ. ಮೂಡಲಗಿ ಹೊಸ ತಾಲೂಕು ರಚನೆಯಾದ ಬಳಿಕ ತಾಲೂಕಿನ ಕೂಗು ಇಲ್ಲಿನ ಉಪನೋಂದಣಾಧಿಕಾರಿಗಳ ಕಛೇರಿ ಆರಂಭಿಸುವುದು ಬಹುದಿನಗಳ ಬೇಡಿಕೆಯಾಗಿತ್ತು. ನಾನು ಕೂಡಾ ಈ ನಿಟ್ಟಿನಲ್ಲಿ ಸರಕಾರದ ಮೇಲೆ ಸಾಕಷ್ಟು ಒತ್ತಡಗಳನ್ನು ಹೇರಿದ್ದೆ. ಹಲವಾರು ಬಾರಿ ಮನವಿಯನ್ನು ಕೂಡಾ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೆ. ಕೆಲವರು ಮೂಡಲಗಿಗೆ ಉಪನೋಂದಣಾಧಿಕಾರಿಗಳ ಕಛೇರಿ ಮಾಡುವುದು ಇವರಿಗೆ ಮನಸ್ಸಿಲ್ಲ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದರು. ಆದರೆ ನನಗೆ ಮೂಡಲಗಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ಮುಖ್ಯವಾಗಿದ್ದು, ಯಾರೂ ಏನೇ ಅಂದರೂ ಅದಕ್ಕೆ ಎಂದಿಗೂ ತಲೆಕೆಡಿಸಿಕೊಂಡಿಲ್ಲ ಎಂದು ಅವರು ತಿಳಿಸಿದರು.
ತಾಲೂಕು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಬೇಕಾಗಿದೆ. ಈ ದಿಸೆಯಲ್ಲಿ ಮೂಡಲಗಿಗೆ ಅಗತ್ಯವಿರುವ ಎಲ್ಲ ತಾಲೂಕು ಮಟ್ಟದ ಸರಕಾರಿ ಕಛೇರಿಗಳನ್ನು ಮಂಜೂರು ಮಾಡಿಸುತ್ತಿದ್ದೇನೆ, ಈಗಾಗಲೇ ಅಗ್ನಿ ಶಾಮಕ ಠಾಣೆ ಮಂಜುರಾತಿ ಹಂತದಲ್ಲಿದೆ. ಮಿನಿ ವಿಧಾನಸೌಧ ಕೂಡಾ ಪ್ರಗತಿಯಲ್ಲಿದೆ. ರಸ್ತೆಗಳ ಪ್ರಗತಿಗಾಗಿ ಮೂಡಲಗಿಗೆ ನಗರೋತ್ಥಾನ ಯೋಜನೆ ಅಡಿ ೪ ಕೋಟಿ ರೂಪಾಯಿ ಅನುದಾನ ಬಂದಿದ್ದು. ಭೂಮಿ ಪೂಜೆ ಮಾಡಲಾಗಿದೆ. ಇನ್ನೂ ೨ ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಮೂಡಲಗಿ ತಾಲೂಕು ಅಭಿವೃದ್ಧಿಯಾಗಬೇಕು. ಸಾರ್ವಜನಿಕರ ಅಲೆದಾಟ ತಪ್ಪಿಸಲು ಎಲ್ಲ ಕಛೇರಿಗಳನ್ನು ಆರಂಭಿಸುತ್ತೇನೆ, ಮೂಡಲಗಿಯಲ್ಲಿ ಉಪನೋಂದಣಾಧಿಕಾರಿಗಳ ಕಛೇರಿ ಆರಂಭವಾಗಿರುವದರಿಂದ ಗೋಕಾಕ ತಾಲೂಕಿಗಿಂತ ಮೂಡಲಗಿ ತಾಲೂಕಿಗೆ ಅಧಿಕ ಪ್ರಮಾಣದಲ್ಲಿ ಆದಾಯ ಬರಲಿದೆ. ಜೊತೆಗೆ ಮೂಡಲಗಿ ಶ್ರೀಮಂತ ತಾಲೂಕು ಆಗುವದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ. ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮಿಜಿ, ಶ್ರೀಧರಬೋಧ ಸ್ವಾಮಿಜಿಗಳು ವಹಿಸಿದ್ದರು. ಗುಂಡು ಆಚಾರ್ಯ ತೇಗ್ಗಿ ಮತ್ತು ರಾಘವೇಂದ್ರ ಆಚಾರ್ಯ ತೆಗ್ಗಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಜಿಲ್ಲಾ ನೋಂದಣಾಧಿಕಾರಿ ಶಿವಕುಮಾರ ಅಪರಂಜಿ, ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ, ತಾ.ಪಂ ಇಓ ಎಫ್.ಎಸ್.ಚಿನ್ನನವರ, ಮೂಡಲಗಿ ಉಪ ನೋಂಧಣಾಧಿಕಾರಿ ಓ.ಹರಿಯಪ್ಪ ಇನ್ನಿತರರು ಉಪಸ್ಥಿತರಿದ್ದರು