ಕಣಕುಂಬಿ ಅಬಕಾರಿ ಠಾಣೆ ವ್ಯಾಪ್ತಿಯ ಸುರಳ ಕ್ರಾಸ್ ಬಳಿ ಗುರುವಾರ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಲಾರಿ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು, ನಾಲ್ವರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ, ಲಾರಿ ಚಾಲಕ ಪ್ರದೀಪಕುಮಾರ ಉರ್ಪ ಭಗವತಿ ಪ್ರಸಾದ, ಕ್ಲೀನರ್ ರಾಮಚಂದರ ರಾಮ ನಿಹಾಲ್ ಪಾಸಿ ಪುರವಾ ಬಂಧಿತರು.
ಲಾರಿಯಲ್ಲಿದ್ದ 1093.4 ಲೀಟರ್ ಗೋವಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ₹27.52 ಲಕ್ಷ ಮೌಲ್ಯದ ಮದ್ಯ, ₹25 ಲಕ್ಷ ಮೌಲ್ಯದ ಲಾರಿ ಸೇರಿದಂತೆ ಒಟ್ಟು ₹52.52 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ, ಜಂಟಿ ಆಯುಕ್ತ ಪಿರೋಜ್ಖಾನ್ ಖಿಲ್ಲೇದಾರ ಆದೇಶದಂತೆ ಉಪ ಆಯುಕ್ತೆ ವನಜಾಕ್ಷಿ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಎಸ್ಐ ರವಿ ಎಂ. ಮುರಗೋಡ, ನಿರೀಕ್ಷಕರಾದ ಮಂಜುನಾಥ ಗಲಗಲಿ, ಬಾಳಗೌಡ ಪಾಟೀಲ, ದುಂಡಪ್ಪ ಹಕ್ಕಿ ಮತ್ತು ಕಾನ್ಸ್ಟೆಬಲ್ಗಳಾದ ಆರುಣಕುಮಾರ ಬಂಡಿಗಿ, ಮಂಜುನಾಥ ಮಾಸ್ತಮರಡಿ, ಗುಂಡರಾವ್ ಪೂಜೇರಿ, ವಿಠಲ ಕ್ವಾರಿ, ಮಹಾದೇವ ಕಟಗೆನ್ನವರ, ಬಿ.ಎಸ್. ಅಟಿಗಲ್, ಸುನೀಲ ಪಾಟೀಲ ಹಾಗೂ ವಾಹನ ಚಾಲಕ ಸಯ್ಯದ್ ಜಲಾನಿ ಈ ದಾಳಿಯ ತಂಡದಲ್ಲಿದ್ದರು.