ಬೈಲಹೊಂಗಲ : ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಭಾವಿಹಾಳ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಾರುದ್ರಪ್ಪ ಕುಂಬಾರ್ ಮತ್ತು ಶಂಕರಪ್ಪ ಕುಂಬಾರ್ ಕುಟುಂಬದ ನಡುವೆ ಕಳೆದ ಕೆಲವು ವರ್ಷಗಳಿಂದ ಜಮೀನು ವಿವಾದ ನಡೆಯುತ್ತಿತ್ತು. ಹಾಗಾಗಿ ಶಂಕರಪ್ಪ ಕುಂಬಾರ್ ನ್ಯಾಯಾಲಯದ ಮೆಟ್ಟಿಲು ಏರಿದರು.
ಜಮೀನಿನಲ್ಲಿ ಬೆಳೆದು ನಿಂತಿದ್ದ ತೇಗದ ಮರಗಳನ್ನು ಕಡಿದ ಕಾರಣ ಈ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಕಡಿದ ತೇಗದ ಮರಗಳನ್ನು ಹೊತ್ತೊಯ್ಯುವ ವಿಚಾರದಲ್ಲಿ ಗಲಾಟೆ ನಡೆದು ಎರಡು ಕುಟುಂಬಗಳ ನಡುವೆ ಜಟಾಪಟಿ ನಡೆದಿದೆ. ಈ ವೇಳೆ ನಡೆದ ಗಲಾಟೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.ಅವರನ್ನು ಬೈಲಹೊಂಗಲ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.