ಬೆಳಗಾವಿ: ಮಂಗಳವಾರ ಕೊಲ್ಲಾಪುರ ವೃತ್ತದಿಂದ ತಮ್ಮ ಅಪಾರ ಅಭಿಮಾನಿಗಳು, ಆಪ್ ಕಾರ್ಯಕರ್ತರೊಂದಿಗೆ ಪಾಲಿಕೆಗೆ ತೆರಳಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಕುಮಾರ ಟೋಪಣ್ಣವರ ಅವರು ಬೆಳಗಾವಿ ಬುಡಾದಲ್ಲಿಯೂ ಸಾಕಷ್ಟು ಭ್ರಷ್ಟಾಚಾರವಾಗಿದೆ. ಕಳೆದ ವಾರ ಕಣಬರಗಿ ಹೊಸ ಬಡಾವಣೆ ರದ್ದು ಮಾಡಿದ್ದಾರೆ. ಕೆಲವೇ ಕೆಲವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ನಾನು ಹೋರಾಟದ ಮೂಲಕವೇ ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೇನೆ. ರಾಣಿಚನ್ನಮ್ಮ ವಿಶ್ವ ವಿದ್ಯಾಲಯ ತರಲು ನಿರಂತರವಾಗಿ ಹೋರಾಟ ಮಾಡಿದ್ದೇನೆ. ಇದನ್ನು ಯುವಕರು ತಿಳಿದುಕೊಳ್ಳಬೇಕು. ಒಂದು ಬಾರಿ ನನಗೆ ಅವಕಾಶ ಕೊಟ್ಟರೆ ಬೆಳಗಾವಿ ನಗರವನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು.
ಬೆಳಗಾವಿಯಲ್ಲಿ ಯುವಕರಿಗೆ ಉದ್ಯೋಗಾವಕಾಶ, ಮಹಿಳೆಯರ ಭದ್ರತೆ, ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆ ಬರೆಯಲು ಉಚಿತ ಕೋಚಿಂಗ್ ಸೆಂಟರ್ ಮಾಡುವ ಪ್ರಯತ್ನ ಮಾಡಿ ಬೆಳಗಾವಿ ನಗರದ ಯುವಕರು ದೇಶದಲ್ಲಿ ಮಿಂಚುವ ಹಾಗೆ ಮಾಡುವೆ ಎಂದರು.ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ, ಉತ್ತರದಲ್ಲಿ ಕಾಂಗ್ರೆಸ್ ಶಾಸಕರಿದ್ದಾಗ ಕೋಮು, ಗಲಭೆಗಳಾಗಿದ್ದಾವೆ. ಜನರು ಅರ್ಥ ಮಾಡಿಕೊಳ್ಳಬೇಕು. ಆ ರೀತಿಯ ವ್ಯವಸ್ಥೆ ಮತ್ತೊಮ್ಮೆ ಬೆಳಗಾವಿ ನಗರದಲ್ಲಿ ನಿರ್ಮಾಣವಾಗಬಾರದು.
ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿ ಬೆಳೆಯುತ್ತಿದೆ. ಬೆಳಗಾವಿ ಹೋರಾಟಕ್ಕೆ ಹೆಸರು ವಾಸಿಯಾಗಿದೆ. ಬೆಳಗಾವಿಯಿಂದಲೇ ಆಮ್ ಆದ್ಮಿ ಕ್ರಾಂತಿ ಮಾಡಲಿದೆ. ಇಲ್ಲಿಂದಲೇ ರಾಜ್ಯಾದ್ಯಂತ ಹೆಚ್ಚು ಸ್ಥಾನ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.