ಬೆಳಗಾವಿ: ಕರ್ನಾಟಕ ಕ್ವಾರಿ, ಕ್ರಷರ್ ಮಾಲೀಕರು ಸೇರಿಕೊಂಡು ಕಳೆದ ಡಿ.21 ರಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಮಾತ್ರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಕರ್ನಾಟಕ ಕ್ವಾರಿ, ಕ್ರಷರ್ ಮಾಲೀಕರ ಸಂಘದ ಜಿಲ್ಲಾದ್ಯಕ್ಷ ಸಂಜೀವ ಹಟ್ಟಿಹೊಳಿ ಹೇಳಿದರು.
ಮಂಗಳವಾರ ನಗರದಲ್ಲಿ ಕರೆಯಲಾದ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಇಲಾಖೆ ಹಾಗೂ ಕ್ವಾರಿ ಮಾಲೀಕರಿಂದಲೂ ಹಣ ವಸೂಲಿ ಮಾಡುತ್ತಿದ್ದಾರೆ. ಕಳೆದ 40 ವರ್ಷಗಳಿಂದ ಗಣಿಗಾರಿಕೆ ಮಾಡಿಕೊಂಡು ಬರುತ್ತಿದ್ದೇವೆ. 1994ರಲ್ಲಿ ಸರಕಾರ ರಾಯಲ್ಟಿ ಕಟ್ಟಿ ಕೆಲಸ ಆರಂಭಿಸುವಂತೆ ಆದೇಶ ಮಾಡಿತ್ತು. 80 ರಷ್ಟು ಪ್ರತಿಶತ ಸರ್ಕಾರ ಅನುದಾನ ನೀಡುತ್ತಿತ್ತು.
ಆದರೆ ಇತ್ತೀಚೆಗೆ ಸರಕಾರ 30 ಪ್ರತಿಶತ ರಾಜಧನ ತುಂಬಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಸರಕಾರಕ್ಕೆ ಕಲ್ಲು ಹಾಗೂ ಕ್ವಾರಿಯಿಂದ ರಾಜಧನ ಬಂದಿದೆ. ಆದರೂ ಮತ್ತೇ ರಾಯಲ್ಟಿ ಕಟ್ಟುವಂತೆ ನಮ್ಮ ಮೇಲೆ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ನಮ್ಮ ಪರ ಧ್ವನಿ ಎತ್ತಿತ್ತು. ಆದರೆ ಈಗ ಬಿಜೆಪಿ ಸರಕಾರ ಇದ್ದರೂ ನಮಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ನಮಗೆ ಕಲ್ಲು ಕ್ವಾರಿಯ ಮೇಲೆ ರಾಜಧನ ಹಾಕುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಗಣಿಗಾರಿಕೆ ಮಾಡುವುವರಲ್ಲಿ ಎಲ್ಲ ಪಕ್ಷದ ರಾಜಕಾರಣಿಗಳು ಮಾಡುತ್ತಿದ್ದಾರೆ. ಆದರೆ ನಮ್ಮ ಪರವಾಗಿ ಯಾರೂ ಧ್ವನಿ ಎತ್ತುತ್ತಿಲ್ಲ. ಸದನದಲ್ಲಿ ಕೃಷ್ಣಬೈರೆಗೌಡ ಬಿಟ್ಟರೆ ಯಾರೂ ನ್ಯಾಯ ಕೊಡಿಸುವ ಕೆಲಸ ಮಾಡದೆ ಇರುವುದು ದುರ್ದೈವದ ಸಂಗತಿ ಎಂದರು.
ಸರಕಾರ ಹೊರ ರಾಜ್ಯದಿಂದ ಕಲ್ಲು, ಕ್ವಾರಿ ತರಿಸಲು ಸಿದ್ಧವಾಗಿದೆ. ಅವರಿಗೆ ಸಕಲ ಭದ್ರತೆ ನೀಡುತ್ತಿದ್ದಾರೆ. ಆದರೆ ನಮಗೆ ಮಾತ್ರ ರಾಜಧನ ಕಟ್ಟುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪಿಎಂ ಪಾಟೀಲ, ಶಿವಾನಂದ ಪಡಗುರಿ, ವಸಂತ ತಾಹಾಶಿಲ್ದಾರ, ಫಯಾಜ್ ಅಂಕಲಗಿ, ಸಂದೀಪ ಒಉಳಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.