ಬೆಳಗಾವಿ: ಕೈಕೇಯಿ ಇದ್ದಿದ್ದಕ್ಕೆ ರಾಮಾಯಣ ಆಯ್ತು, ಮನೆ ಒಡೆಯಿತು, ವನವಾಸ ಅನುಭವಿಸಬೇಕಾಯಿತು. ಕೈಕೇಯಿಗೆ ಗೌರವ ನೀಡಿ ಅಂತಾ ನನಗ್ಯಾರು ಹೇಳಬೇಡಿ. ಅದು ನಾನು ಮಾಡಿಯೂ ಇಲ್ಲ, ಮಾಡುವುದೂ ಇಲ್ಲ. ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಭಾಷಣದ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಪರೋಕ್ಷವಾಗಿ ಕೈಕೇಯಿಗೆ ಹೋಲಿಸಿದರು. ನಾನು ಅಕ್ಕಾ ಬಗ್ಗೆ ಹೇಳಿದ್ದೇನೆ, ಮಹಿಳೆಯರ ವಿರೋಧಿ ಹೇಳಿಕೆ ನೀಡಿಲ್ಲ. ಜೀಜಾಮಾತಾ ಇಲ್ಲದಿದ್ದರೆ ಛತ್ರಪತಿ ಶಿವಾಜಿ ಮಹಾರಾಜ ಇರುತ್ತಿರಲಿಲ್ಲ. ಕೌಸಲ್ಯೆ ಇಲ್ಲದಿದ್ದರೆ ರಾಮ ಇರುತ್ತಿರಲಿಲ್ಲ. ತ್ರಿಶಲಾ ಇಲ್ಲದಿದ್ದರೆ ಭಗವಾನ್ ಮಹಾವೀರ ಇರ್ತಿರಲಿಲ್ಲ ನನಗೆ ಗೊತ್ತು. ಆದರೆ ನಮ್ಮ ಭಾರತದ ಇತಿಹಾಸದಲ್ಲಿ ರಾಮಾಯಣದಲ್ಲಿ ಕೈಕೇಯಿ ಬಂದು ಹೋದಳು ಎಂದರು.
ಅವರು ಕುಕ್ಕರ್, ಡಬ್ಬಿ ಕೊಡುತ್ತಾರೆ. ನೀವೇನೂ ಬರೀ ಭಾಷಣ ಮಾಡುತ್ತೀರಿ ಅಂತೀರಬಹುದು. ಅವರು ಏನು ಕೊಡುತ್ತಾರೆ, ಅದರ ಡಬಲ್ ಕೊಡುತ್ತೇನೆ, ಆದರೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಬೇಕು ಎಂದು ಬಹಿರಂಗವಾಗಿಯೇ ಹೇಳಿದರು.
ಕಾಂಗ್ರೆಸ್ ಪಕ್ಷ ಜೊತೆ ಇರುವುದು ಹಿಂದೂ ಸಂಸ್ಕೃತಿಗೆ ಮಾಡಿದ ಅಪಮಾನ. ಹರ್ಷಾ ಶುಗರ್ಸ್ಗೆ ಕಬ್ಬು ಕಳಿಸಿದ ರೈತರನ್ನು ಕೇಳಿರಿ. ರೈತರ ಎರಡೆರಡು ಟನ್ ಕಬ್ಬಿನ ದುಡ್ಡು ಹೊಡೆದು, ಅದನ್ನೇ ವಾಪಸ್ ಕೊಡುತ್ತಾರೆ. ಮತ್ತೆ ನೀವು ಹೇಳುತ್ತೀರಿ ಅಕ್ಕಾ ಕೊಟ್ಟಾಳ ಅಂತಾ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಂಜಯ್ ಪಾಟೀಲ್ ವಾಗ್ದಾಳಿ ನಡೆಸಿದರು.