ಬೆಳಗಾವಿ: ರಿಂಗ್ರೋಡ್ ನಿರ್ಮಾಣದ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಫಲವತ್ತಾದ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಇಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಬೆಳಗಾವಿ ಸುತ್ತಮುತ್ತಲೂ ಫಲವತ್ತಾದ ಭೂಮಿ ಇದೆ. ತುಂಡು ಭೂಮಿಗಳು ಇರುವ ಹಿನ್ನೆಲೆ ಒಂದು ಎಕರೆ, ಎರಡು ಎಕರೆ, ಅರ್ಧ ಎಕರೆಯಲ್ಲಿಯೇ ವರ್ಷಕ್ಕೆ ಮೂರು ಬೆಳೆ ಬೆಳೆದು ತಮ್ಮ ಕುಟುಂಬವನ್ನು ಇಲ್ಲಿನ ರೈತರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸುವರ್ಣಸೌಧ ಸೇರಿ ಇನ್ನಿತರ ಸಂಬಂಧ ಸಾಕಷ್ಟು ಭೂಮಿಯನ್ನು ಈ ರೈತರು ಕಳೆದುಕೊಂಡಿದ್ದಾರೆ. ಇದೀಗ ರಿಂಗ್ ರೋಡ್ ನಿರ್ಮಾಣಕ್ಕಾಗಿ ಮತ್ತೆ ರೈತರ ಭೂಮಿ ಸ್ವಾದೀನಕ್ಕೆ ಸರ್ಕಾರಕ್ಕೆ ಮುಂದಾಗಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಎಂಇಎಸ್ ನೇತೃತ್ವದಲ್ಲಿ ವಕೀಲರ ಸಂಘ, ಶ್ರೀರಾಮಸೇನಾ ಹಿಂದೂಸ್ತಾನ, ರೈತ ಸಂಘಟನೆಗಳು ಸೇರಿ ಇನ್ನಿತರ ಸಂಘಟನೆಗಳು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಈ ರ್ಯಾಲಿಯು ಕಾಲೇಜು ರಸ್ತೆ, ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಡಿಸಿ ಕಚೇರಿವರೆಗೂ ನಡೆಯಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ರಸ್ತೆಯಲ್ಲಿ ಬಾರುಕೋಲು ಹೊಡೆದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಕೀಲರ ಸಂಘದ ಅಧ್ಯಕ್ಷ ಪ್ರಭು ಯತ್ನಟ್ಟಿ ಮಾತನಾಡಿ ರಿಂಗ್ ರೋಡ್ ಹೆಸರಿನಲ್ಲಿ ರೈತರ ನೂರಾರು ಎಕರೆಗೂ ಹೆಚ್ಚು ಫಲವತ್ತಾದ ಭೂಮಿ ಸ್ವಾದೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದಾರೆ. ಸರಿಯಾಗಿ ಸರ್ವೇ ಮಾಡಿಲ್ಲ. ರೈತರ ಫಲವತ್ತಾದ ಜಮೀನು ಕಬಳಿಸಲು ಕೆಲ ಫಟ್ಟಬದ್ರ ಹಿತಾಸಕ್ತಿಗಳು ಹುನ್ನಾರ ನಡೆಸಿವೆ. ಹೀಗಾಗಿ ಕರ್ನಾಟಕ ಸರ್ಕಾರ ರೈತರ ಜಮೀನು ಕಸಿದುಕೊಳ್ಳುವ ಕೆಲಸ ಮಾಡಬೇಡಿ. ಚಳಿಗಾಲ ಅಧಿವೇಶನ ವೇಳೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಮನೋಹರ ಕಿಣೇಕರ್ ಮತ್ತು ರಮಾಕಾಂತ ಕೊಂಡೂಸ್ಕರ್ ಮಾತನಾಡಿ ಬಾರುಕೋಲು ಚಳುವಳಿ ಹಮ್ಮಿಕೊಂಡಿದ್ದೇವೆ. 72 ಕಿ.ಮೀ. ರಿಂಗ್ ರೋಡ್ ಮಾಡುತ್ತಿದ್ದಾರೆ. ಇದರಲ್ಲಿ ಬಡ ರೈತರ 1372 ಎಕರೆ ಫಲವತ್ತಾದ ಭೂಮಿ ಹೋಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು, ಎಂಪಿ, ಎಂಎಲ್ಎಗಳ ಜಮೀನು ಹೋಗುತ್ತಿಲ್ಲ. ಹೀಗಾಗಿ ತಕ್ಷಣವೇ ಈ ರಿಂಗ್ ರೋಡ್ ರದ್ದುಪಡಿಸಬೇಕು. ಇಲ್ಲದಿದ್ರೆ ನಾವೆಲ್ಲಾ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ರಿಂಗ್ ರೋಡ ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಾವಿರಾರು ರೈತರು, ಮಹಿಳೆಯರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.