
ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಬೇಕೆಂದು ಕಳೆದ ಐದು ತಿಂಗಳಿಂದ ಸಮಾನ ಮನಸ್ಕ ಕನ್ನಡ ಸಂಘಟನೆಗಳು ಹೋರಾಟ ನಡೆಸುತ್ತಿರುವ ಬಗ್ಗೆ ತಾವು ಮತ್ತು ನಗರಾಭಿವೃದ್ಧಿ ಖಾತೆಯ ಸಚಿವರು ಈಗಾಗಲೇ ಚರ್ಚೆ ನಡೆಸಿದ್ದಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಸತೀಶ ಜಾರಕಿಹೊಳಿ ಅವರು ಶನಿವಾರ ಮುಂಜಾನೆ ಕನ್ನಡ ಸಂಘಟನೆಗಳಿಗೆ ತಿಳಿಸಿದರು.
ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ ನಡೆದ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ಸಂಘಟನೆಗಳ ಮುಖಂಡರು ಸಚಿವರನ್ನು ಭೆಟ್ಟಿಯಾಗಿ ಮನವಿ ಸಲ್ಲಿಸಿದರು.
ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿರುವುದಾಗಿ ಹೇಳಿದ ಸಚಿವರು ಸೂಕ್ತ ಕ್ರಮ ಕೈಕೊಳ್ಳುವ ಭರವಸೆ ನೀಡಿದರು.
ಕಳೆದ ಮೇ 13 ರ ಪಾಲಿಕೆಯ ಸಭೆ ನಡೆದ ನಂತರ ಯಾವದೇ ಪರಿಷತ್ ಸಭೆಯೇ ನಡೆದಿಲ್ಲ.ಪಾಲಿಕೆಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕೆಂದು ಮುಖಂಡರು ಸಚಿವರನ್ನು ಒತ್ತಾಯಿಸಿದರು.
ಇದೇ ಆಗಸ್ಟ್ 18 ರಂದು ಪಾಲಿಕೆಯ ಸಭೆಯನ್ನು ಕರೆಯಲಾಗಿದೆ.ಸಭೆಯ ಕಲಾಪ ಪಟ್ಟಿಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯ ಬಗ್ಗೆ ಪ್ರಸ್ತಾಪವೇ ಇಲ್ಲ.ಗೊತ್ತುವಳಿ ಸೇರಿಸದೆ ಸಭೆ ನಡೆಸಿದರೆ ಕನ್ನಡ ಸಂಘಟನೆಗಳು ಪರಿಷತ್ ಸಭಾಂಗಣಕ್ಕೆ ನುಗ್ಗಿ ಪ್ರತಿಭಟಿಸಬೇಕಾದಿತೆಂದು ಕನ್ನಡ ಮುಖಂಡರು ಸಚಿವರಿಗೆ ತಿಳಿಸಿದರು.
ಬೆಳಗಾವಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದಾಗ ಮಹಾಪೌರರು ಪ್ರಥಮ ಪ್ರಜೆಯಾಗಿ ಸ್ವಾಗತಿಸುವುದು ಒಂದು ಸತ್ ಸಂಪ್ರದಾಯವಾಗಿದೆ.ಎಂ ಇ ಎಸ್
ಮಹಾಪೌರರು ಸಹಿತ ರಾಜ್ಯದ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದ ಉದಾಹರಣೆಗಳಿವೆ.ಆದರೆ ಈಗ ಪಾಲಿಕೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಪಕ್ಷದ ಮಹಾಪೌರರು ಮತ್ತು ಉಪ ಮಹಾಪೌರರು ಸತ್ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದ್ದಾರೆಂದು ಮನವಿಯಲ್ಲಿ ದೂರಲಾಗಿದೆ.
ಕನ್ನಡ ಮುಖಂಡರು ಬೆಂಗಳೂರಿಗೆ ಬಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಕನ್ನಡ ಮುಖಂಡರು ಸಿದ್ಧರಿದ್ದಾರೆ ಎಂದು ಕನ್ನಡ ಮುಖಂಡರು ಸಚಿವರಿಗೆ ತಿಳಿಸಿದರು.
ಜುಲೈ 28 ರಂದು ಬೆಳಗಾವಿಗೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಖಾತೆ ಸಚಿವ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರು ಕರ್ನಾಟಕ ಪರವಾದ ಗೊತ್ತುವಳಿಯ ಬಗ್ಗೆ ಪಾಲಿಕೆಗೆ ಸರಕಾರ ಸೂಚನೆ ನೀಡಲಿದೆ ಎಂದು ಭರವಸೆ ನೀಡಿದ್ದರು.ಆದರೆ ಇಲ್ಲಿಯವರೆಗೆ ಯಾವದೇ ಸೂಚನೆ ಬಂದಿಲ್ಲ ಎಂದು ಸಚಿವರ ಗಮನಕ್ಕೆ ತರಲಾಯಿತು.
ಸಚಿವರ ಭರವಸೆಯನ್ನು ಕನ್ನಡ ಸಂಘಟನೆಗಳು ಸ್ವಾಗತಿಸಿದ್ದು ಪಾಲಿಕೆಯ ವಿರುದ್ಧ ಪ್ರತಿಭಟನೆಗಳನ್ನು ಮುಂದುವರೆಸಲು ನಿರ್ಧರಿಸಿವೆ.ಅವಶ್ಯಕತೆ ಬಿದ್ದರೆ ಆಗಸ್ಟ್ 20 ರ ನಂತರ ಬೆಂಗಳೂರಿಗೆ ನಿಯೋಗ ಒಯ್ಯಲು ನಿರ್ಣಯಿಸಿವೆ.
ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ,ಮಹಾದೇವ ತಳವಾರ,ಬಲರಾಮ ಮಾಸೇನಟ್ಟಿ,ರಾಜು ಕೋಲಾ,ನ್ಯಾಯವಾದಿ ಆರ್. ಪಿ.ಪಾಟೀಲ,ಸಂತೋಷ ಮಾಸೇನಟ್ಟಿ,ಆನಂದ ಬಿಲಾವರ, ಸಯ್ಯದ್ ಮನ್ಸೂರ್,ಮಹೇಶ ಸಿಗಿಹಳ್ಳಿ,ಸಂತೋಷ ತಳ್ಳಿಮನಿ,ಸಾಗರ್ ಪೂಜಾರಿ,ಎಸ್.ಎಸ್.ಮೂಕನವರ,ಲಕ್ಷ್ಮಣ ಲಮಾಣಿ, ಮೈನು ಮಕಾನದರ ಮುಂತಾದವರು ನಿಯೋಗದಲ್ಲಿದ್ದರು.








