
ಚಿಕ್ಕೋಡಿ:
ಜಲಾಶಯಗಳು ಭರ್ತಿಯಾಗಿದ್ದು ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರೈತರು ಸಹ ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ತಲೆ ಕಡೆಸಿಕೊಂಡಿಲ್ಲ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಏತ ನೀರಾವರಿ ಜಾಕವೆಲ್ ಬಳಿ ರೈತರು ಹೋರಾಟ ನಡೆಸಿದ್ದಾರೆ.
18 ಹಳ್ಳಿಗಳಿಗೆ ನೀರು ನೀಡುವ ಕೊಟಬಾಗಿ ಏತ ನೀರಾವರಿ ನೀರಿಗಾಗಿ ಹೋರಾಟವನ್ನು ರೈತರು ನಡೆಸಿದ್ದಾರೆ.ಕಳೆದ 10 ವರ್ಷಗಳಿಂದ ಕೊನೆಯ ಹಳ್ಳಿಗಳಿಗೆ ನೀರು ಬಾರದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಕೊನೆಯ ಹಳ್ಳಿಗಳ ವರೆಗೂ ನೀರು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಚಿಕ್ಕೋಡಿ ತಾಲೂಕಿನ ಬಂಬಲವಾಡ, ಬೆಳಕೂಡ, ದೋಣವಾಡ ಕರಗಾಂವ ಹಾಗೂ ಕೆಂಚನಟ್ಟಿ ಗ್ರಾಮಗಳಿಗೆ ನೀರು ಬಾರದೆ ಬೆಳೆಗಳು ಒಣಗುತ್ತಿವೆ. ಇತ್ತ ಸರಿಯಾಗಿ ಮಳೆ ಆಗದ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಅನ್ನದಾತ ಅಳಲು ತೋಡಿಕೊಂಡಿದ್ದಾನೆ.ನೀರಾವರಿ ಜಾಕವೆಲ್ ಕಛೇರಿಯಲ್ಲೆ ಠಿಕಾಣಿ ಹೂಡಿ ನೂರಾರು ರೈತರು ಧರಣಿ ನಡೆಸಿದ್ದಾರೆ.ಸ್ಥಳದಲ್ಲೆ ಅಡುಗೆ ಮಾಡಿ ಜಾನುವಾರುಗಳನ್ನ ಕಟ್ಟಿ ರೈತರು ಹೋರಾಟ ನಡೆಸಿದ್ದಾರೆ.ರೈತರು ಪ್ರತಿಭಟನೆಗೆ ಸಜ್ಜಾಗುತ್ತಿದ್ದಂತೆ ಕಛೇರಿಯಿಂದ ಅಧಿಕಾರಿಗಳು ಕಾಲ್ಕಿತ್ತಿದ್ದಾರೆ.ನೀರಾವರಿ ಇಲಾಖೆಯ ಜಾಕವೆಲ್ ಕಛೇರಿಗೆ ಬಾರದೆ ಸಿಬ್ಬಂದಿಗಳು ದೂರ ಉಳಿದಿದ್ದಾರೆ.22 ದಿನಗಳು ಕಳೆದರು ಸೌಜನ್ಯಕ್ಕೂ ಅಧಿಕಾರಿಗಳು ಅತ್ತ ಮುಖ ತೋರಿಸಿಲ್ಲ.ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು ಭರವಸೆ ನೀಡಬೇಕು ಎಂದು
ರೈತರು ಪಟ್ಟು ಹಿಡಿದಿದ್ದಾರೆ.
ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ.ಕಾಲುವೆ ಸ್ವಚ್ಚತೆ ಹೆಸರಿನಲ್ಲಿ ದುಡ್ಡು ಹೊಡೆದಿದ್ದಾರೆ.ಪಂಪಸೆಟಗಳನ್ನ ಸಹ ರೀಪೆರಿ ಮಾಡಿಸಿಲ್ಲಾ ಎಂದು ರೈತರು ಆರೋಪಿಸಿದ್ದು ಜಿಲ್ಲಾಧಿಕಾರಿಗಳು ಬಂದು ಭರವಸೆ ನೀಡುವರೆಗೂ ನಾವು ಪ್ರತಿಭಟನೆ ಕೈ ಬಿಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.













