ಬೆಳಗಾವಿ: ಸೋಮವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಅವರು ಸಿದ್ದರಾಮಯ್ಯನವರು ಕ್ಷೇತ್ರ ಬದಲಾವಣೆ ಮಾಡಿ ಕೋಲಾರದಿಂದ ಸ್ಪರ್ಧೆ ಮಾಡಿದರೂ ಅವರ ಸೋಲು ಖಚಿತ. ಕಾಂಗ್ರೆಸ್ ಮುಳುಗುವ ಹಡಗು. ಕಾಂಗ್ರೆಸ್ ಪರಿಸ್ಥಿತಿ ಯಾವ ರೀತಿ ಬಂದಿದೆ ಎಂದರೆ ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡಿದರೂ ಸೋಲು ಖಚಿತ. ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯನವರು ಕ್ಷೇತ್ರ ಬದಲಾವಣೆ ಮಾಡುವುದು ಸ್ವಾಭಾವಿಕ ಎಂದು ಕುಟುಕಿದರು. ಕಾಂಗ್ರೆಸ್ ಮನಸ್ಥಿತಿಗೆ ಘಟಾನುಘಟಿ ನಾಯಕರು ಪಕ್ಷ ತೊರೆದಿದ್ದಾರೆ. ನೆಹರು, ಇಂದಿರಾ ಗಾಂಧಿ ನಂತರ ಕಾಂಗ್ರೆಸ್ ಬಗ್ಗೆ ಗಟ್ಟಿಯಾಗಿದ್ದ ಗುಲಾಂ ನಬಿ ಆಜಾದ್ ಪಕ್ಷ ಬಿಟ್ಟು ಹೋಗಿದ್ದಾರೆ. ಅವರಿಗಿಂತ ಹೆಚ್ಚು ಬೇಕಾ..? ಕರ್ನಾಟಕದಲ್ಲಿ ಎಸ್.ಎಮ್.ಕೃಷ್ಣ ಬಿಟ್ಟು ಹೋಗಿದ್ದಾರೆ. ಹೀಗೆ ಇನ್ನು ಬಹಳಷ್ಟು ಜನರು ಕಾಂಗ್ರೆಸ್ ಬಿಡಲು ಪಾಳೆ ಹಚ್ಚಲಿದ್ದಾರೆ.
ಇನ್ನು ಕಾಂಗ್ರೆಸ್ನವರು ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಇದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದರೆ ದಲಿತರಿಗೆ ಗೌರವ ಕೊಟ್ಟಂತೆ ಆಗುತ್ತಿತ್ತು. ಆದರೆ ಈಗ ಕಾಂಗ್ರೆಸ್ ಅವಸಾನದ ಅವಧಿಯಲ್ಲಿ ಕೊಟ್ಟಿದ್ದಕ್ಕೆ ಏನೂ ಬೆಲೆ ಇಲ್ಲ ಎಂದು ಕಾರಜೋಳ ಗುಡುಗಿದರು.ಇನ್ನು ವಿವೇಕ್ ಯೋಜನೆಯಡಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ 245 ಕೊಠಡಿಗಳು ಮಂಜೂರಾಗಿವೆ. ಇದಕ್ಕೆ 36 ಕೋಟಿ ಹಣ ಕೂಡ ಮಂಜೂರಾಗಿದೆ. ಈಗ ಪ್ರಾಥಮಿಕ ಶಾಲೆಗಳಿಗೆ ಎಲ್ಲೆಲ್ಲಿ ಕೊಠಡಿಗಳ ಅವಶ್ಯಕತೆಯಿದೆ, ಅವುಗಳ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ಮಾಡುತ್ತಿದ್ದೇವೆ. ಕೆಲವು ಕೊಠಡಿಗಳ ದುರಸ್ಥಿಗೂ ಹಣ ಕೊಡಲಾಗಿದೆ. ಇನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 275 ಕೊಠಡಿಗಳು ಮಂಜೂರಾಗಿವೆ, ಇದಕ್ಕೆ 39 ಕೋಟಿ ಹಣ ಮಂಜೂರಾಗಿದೆ. ಇವತ್ತಿನಿಂದ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ವಿವೇಕ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಏಕಕಾಲಕ್ಕೆ ಚಾಲನೆ ಕೊಡುತ್ತಿದ್ದೇವೆ ಎಂದರು.