ಬೆಳಗಾವಿ: ರವಿವಾರ ಮನೆ ಬಿಟ್ಟು ಓಡಿ ಹೋಗಿದ್ದ ವಂಟಮೂರಿಯ ಪ್ರೇಮಿಗಳು ಮಂಗಳವಾರ ರಾತ್ರಿ ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಗೆ ಬಂದು ನಮಗೆ ಪ್ರಾಣ ಬೆದರಿಕೆ ಇದೆ ರಕ್ಷಣೆ ನೀಡಬೇಕೆಂದು ಪೊಲೀಸರ ಶರಣ ಪಡೆದಿದ್ದಾರೆ.
ವಂಟಮೂರಿಯ ದುಂಡಪ್ಪ ಗಡ್ಕರಿ (24) ಹಾಗೂ ಪ್ರಿಯಾಂಕ (22) ಪ್ರೀತಿಸುತ್ತಿದ್ದರು. ಪ್ರಿಯಾಂಕ ಮನೆಯವರು ಇವರಿಬ್ಬರ ಪ್ರೀತಿ ಒಪ್ಪದೇ, ಬೇರೊಬ್ಬ ವರನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಸೋಮವಾರ ಪ್ರಿಯಾಂಕ ಅವರಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ರವಿವಾರ ರಾತ್ರಿಯೇ ದುಂಡಪ್ಪ- ಪ್ರಿಯಾಂಕ ಮನೆ ಬಿಟ್ಟು ಓಡಿಹೋಗಿದ್ದರು. ಇದರಿಂದ ಸಿಟ್ಟಿಗೆದ್ದ ಯುವತಿಯ ಪಾಲಕರು ಹಾಗೂ ಸಂಬಂಧಿಕರು ಸೇರಿಕೊಂಡು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು.