



ಹಿರಿಮಗನ ಹೆಂಡತಿಯ ಆಸ್ತಿ ವ್ಯಾಜ್ಯದ ವಿಚಾರ ಮನೆಯ ಕಿರಿಮಕ್ಕಳ ಕೊಲೆಗೆ ಕಾರಣವಾಗಿದೆ.ಮನೆಗೆ ನುಗ್ಗಿ ಇಬ್ಬರು ಸಹೋದರರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ.ಕೊಲೆಯಾದ ದುರ್ದೈವಿಗಳನ್ನು ಲಗಮಣ್ಣ ರಾಮಣ್ಣವರ್ (32) ಹಾಗೂ ಬಸಪ್ಪ ರಾಮಣ್ಣವರ್ (38) ಎಂದು ಗುರುತಿಸಲಾಗಿದೆ. 9 ಜನ ದುಷ್ಕರ್ಮಿಗಳು ತಡರಾತ್ರಿ ಮನೆಗೆ ನುಗ್ಗಿ ಅಟ್ಟಹಾಸ ಮೆರೆದಿದ್ದಾರೆ. ಮನೆಯ ಮೇಲೆ ಕಲ್ಲು ತೂರಿ ಕುಟುಂಬಸ್ಥರ ಮೇಲೆ ಕ್ರೌರ್ಯ ಮರೆದಿದ್ದಾರೆ. ಮನೆಯಲ್ಲಿ ಮಲಗಿದ್ದ ಬಾಲಕ, ಹಾಗೂ ಬಾಲಕಿ ಸೇರಿ ವೃದ್ದನ ಮೇಲೂ ಹಲ್ಲೆ ಮಾಡಿದ್ದಾರೆ. ಮನೆಯ ಹಿರಿ ಮಗ ಯಲ್ಲಪ್ಪನಿಗೆ ಅತ್ತೆ ಮಗಳ ಜೊತೆಗೆ 15 ವರ್ಷದ ಹಿಂದೆ ಮದುವೆಯಾಗಿತ್ತು.ಆದರೆ ಕಳೆದ12 ವರ್ಷಗಳ ಹಿಂದೆ ಯಲ್ಲಪ್ಪನ ಪತ್ನಿ ಅಣ್ಣವ್ವ ದೂರವಾಗಿದ್ದಳು. ದಂಪತಿಗಳಿಗೆ ಒಂದು ಗಂಡು ಮಗುವಿದೆ.
ಯಲ್ಲಪ್ಪನಿಂದ ಅಣ್ಣವ್ವ ದೂರಾದರೂ ಸಹ ಆತನ ಕುಟುಂಬದಿಂದ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಳು. 9 ಎಕರೆ ಗದ್ದೆಯ ಪೈಕಿ ಒಂದು ಎಕರೆ ಅಣ್ಣವ್ವ ತನಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಳು. ಇದಕ್ಕೆ ಯಲ್ಲಪ್ಪನ ತಂದೆಯೂ ಸಹ ಒಪ್ಪಿದ್ದ ಎನ್ನಲಾಗಿದೆ.ಆಸ್ತಿ ಸರ್ವೆ ಮಾಡಿಕೊಡುವ ದಿನವೇ ಯಲ್ಲಪ್ಪನ ತಂದೆ ಹಾಗೂ ಆತನ ಕೊಲೆಯಾದ ಇಬ್ಬರು ಕೋರ್ಟ್ ಕೇಸ್ಗೆ ಹೋಗಿದ್ದರು ಎನ್ನಲಾಗಿದೆ. ಅದೇ ದಿನವೇ ಯಲ್ಲಪ್ಪನ ತಂದೆ ಅಣ್ಣವ್ವನಿಗೆ ಕೊಡ್ತಿನಿ ಎಂದಿದ್ದ ಹೊಲದ ಸರ್ವೆ ನಡೆಸಲು ಅಧಿಕಾರಿಗಳು ಬಂದಿದ್ದರು ಎನ್ನಲಾಗಿದೆ.ಈ ವೇಳೆ ತಂದೆ ಮಕ್ಕಳು ಎಲ್ಲರೂ ಸೇರಿ ಸರ್ವೆ ಕಾರ್ಯಕ್ಕೆ ಹಾಜರಾಗದೇ ಇರುವುದು ಅಣ್ಣವ್ವ ಹಾಗೂ ಆಕೆಯ ಸಂಬಂಧಿಕರನ್ನು ಕೆರಳಿಸಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ತಡರಾತ್ರಿ ಮನೆಗೆ ನುಗ್ಗಿದ ಅಣ್ಣವ್ವನ ಸಂಬಂಧಿಕರು ಮನೆಯ ಹೊರಗೆ ಮಲಗಿದ್ದ ಬಸಪ್ಪ ಹಾಗೂ ಲಗಮಪ್ಪನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಇಬ್ಬರೂ ಸಹೋದರರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಯಲ್ಲಪ್ಪನ ತಂದೆಯ ಕೈ ಸಹ ಮುರಿದಿದೆ. ಸದ್ಯ ಕೊಲೆ ಮಾಡಿರುವ ಆರೋಪಿಗಳು ಪರಾರಿಯಾಗಿದ್ದರೆ ಕೊಲೆಗೆ ಕಾರಣವಾದ ಅಣ್ಣವ್ವಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..








