ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ಖಾನಾಪುರ ವ್ಯಾಪ್ತಿಯ ಗ್ರಾಮದಲ್ಲಿ ರೈತರೊಬ್ಬರ ಮೇಲೆ ಕರಡಿ ದಾಳಿ ಮಾಡಿದೆ. ಘಟನೆಯಲ್ಲಿ ದಾಳಿಗೀಡಾದ ರೈತ ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಜಮೀನಿನಲ್ಲಿ ಇತರ ಕಾರ್ಮಿಕರ ಜೊತೆಗೆ ಕೆಲಸ ಮಾಡಿಕೊಂಡಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ ಘಟನೆ ನಡೆದಿದೆ.
ಜಿಲ್ಲೆಯ ಖಾನಾಪುರ ಸಮೀಪದ ಘೋಸೆಬದ್ರುಕ ಗ್ರಾಮದಲ್ಲಿ ಈ ಘಟನೆ ನಡೆದಿದೆ. 63 ವರ್ಷದ ರೈತ ಭೀಮಾಜಿ ಮಿರಾಶಿ ಅವರು ಈ ಕರಡಿ ದಾಳಿಗೆ ಬಲಿಯಾಗಿದ್ದಾರೆ.
ರೈತ ಭೀಮಾಜಿ ಅವರು ತಮ್ಮ ಜಮೀನಿನಲ್ಲಿ ಎಂದಿನಿಂತೆ ಇತರ ಕಾರ್ಮಿಕರ ಜೊತೆಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಎಕಿ ಅವರ ಮೇಲೆ ಎರಗಿ ಬಂದ ಕರಡಿ ದಾಳಿ ನಡೆಸಿದೆ. ಪಕ್ಕದಲ್ಲಿದ್ದ ಇತರ ರೈತರು ಕಲ್ಲೆಸೆದು, ಕೂಗಾಡಿದರೂ ರೈತನನ್ನು ಬಿಡದ ಕರಡಿ ಸುಮಾರು ಎರಡು ಕಿಲೋ ಮೀಟರ್ ಎಳೆದೊಯ್ದಿದೆ. ಈ ವೇಳೆ ರೈತನು ಮೃತಪಟ್ಟಿದ್ದು, ಹತ್ತಿರದ ಕಾಡಿನೊಳಗೆ ಅವರ ದೇಹ ಬಿಟ್ಟು ಕರಡಿ ಓಡಿದೆ.
ಕರಡಿ ದಾಳಿ ಮತ್ತು ಭೀಮಾಜಿ ಅವರ ಸಾವಿನಿಂದ ಗ್ರಾಮಸ್ಥರದಲ್ಲಿ ಮತ್ತೆ ಎಲ್ಲಿ, ಯಾವಾಗ ಕರಡಿ ಬರುತ್ತದೋ, ಯಾರ ಮೇಲೆ ದಾಳಿ ಮಾಡುವುದೋ ಎಂದು ಭಯದಿಂದ ಜೀವಿಸುತ್ತಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಮೃತ ರೈತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಮತ್ತು ಜೊತೆಗೆ ಕಾಡುಪ್ರಾಣಿಗಳು ಗ್ರಾಮಕ್ಕೆ ನುಗ್ಗದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಈ ಪ್ರಕರಣ ಸದ್ಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.